ಚಿತ್ರ ಸಾಹಿತಿ ಕೆ. ಕಲ್ಯಾಣ್ ಪತ್ನಿಯ ಅಪಹರಣ: ದೂರು ದಾಖಲು

ಬೆಳಗಾವಿ: ಅಡುಗೆ ಕೆಲಸದ ಮಹಿಳೆ ತನ್ನ ಪರಿಚಯದ ವ್ಯಕ್ತಿಯೊಂದಿಗೆ ಸೇರಿಕೊಂಡು
ಚಲನಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಪತ್ನಿ, ಅತ್ತೆ ಹಾಗೂ ಮಾವನನ್ನು ಅಪಹರಿಸಿ ಆಸ್ತಿ ಬರೆಸಿಕೊಂಡಿರುವ ಘಟನೆ ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ಆರೋಪಿ ಗಂಗಾ ಕುಲಕರ್ಣಿ (ಅಡುಗೆ ಕೆಲಸದಾಳು) ಬೀಳಗಿಯ ಶಿವಾನಂದ ಬಸವರಾಜ ವಾಲಿ ಜೊತೆ ಸೇರಿಕೊಂಡು ಪತ್ನಿ ಅಶ್ವಿನಿ, ಅತ್ತೆ ರಾಧಿಕಾ ಸಾತ್ವಿಕ್ ಹಾಗೂ ಮಾವ ಕೃಷ್ಣ ಸಾತ್ವಿಕ್ ಅವರನ್ನು ಪುಸಲಾಯಿಸಿ ಮೋಸ ಮಾಡಿದ್ದಾರೆ.

ಮೂವರ ಬ್ಯಾಂಕ್‌ ಖಾತೆಯಿಂದ ಶಿವಾನಂದ ಅವರ ಖಾತೆಗೆ ₹ 19.80 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಜಂಟಿ ಖಾತೆಯಲ್ಲಿದ್ದ ಸಿಟಿಎಸ್ ನಂ.1096/ಎ ನಿವೇಶನವನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಮೋಸ ಎಸಗಿದ್ದಾರೆ ಎಂದು ಚಿತ್ರ ಸಾಹಿತಿ ಕಲ್ಯಾಣ್ ದೂರು ನೀಡಿದ್ದಾರೆ.