ಚಿತ್ರ ಸಾಹಿತಿ ಕೆ. ಕಲ್ಯಾಣ್‌ ದಾಂಪತ್ಯದಲ್ಲಿ ಬಿರುಕು: ಪತ್ನಿ ಅಶ್ವಿನಿ ವಿಚ್ಛೇದನಕ್ಕಾಗಿ ಅರ್ಜಿ

ಬೆಳಗಾವಿ: ಚಿತ್ರ ಸಾಹಿತಿ ಕೆ. ಕಲ್ಯಾಣ್‌ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಪತ್ನಿ ಅಶ್ವಿನಿ ವಿಚ್ಛೇದನ ಕೋರಿ ಜೂನ್ 26ರಂದು ಇಲ್ಲಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಅಶ್ವಿನಿ ಪರ ವಕೀಲ ಸತೀಶ್ ದಳವಾಯಿ ತಿಳಿಸಿದ್ದಾರೆ.

ಕಲ್ಯಾಣ್ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ವಿಚ್ಛೇದನ ಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕಲ್ಯಾಣ್ ವಿರುದ್ಧ ಪತ್ನಿ ಮಾಳಮಾರುತಿ ಠಾಣೆಗೆ ಜೂನ್ 26ರಂದು ದೂರು ಕೂಡ ನೀಡಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿಲ್ಲ. ಆದರೆ, ಕಲ್ಯಾಣ್‌ ಕೊಟ್ಟಿರುವ ಸುಳ್ಳು ದೂರನ್ನು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಶನಿವಾರ ದೂರಿದರು.

ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ಅಶ್ವಿನಿ ಅವರ ಸೋದರ ಸಂಬಂಧಿ. ಆಶ್ವಿನಿ ತಂದೆ–ತಾಯಿಯನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.