ಫೆ.23: ಕೃಷಿಕ ಸಂಘದ ಆಶ್ರಯದಲ್ಲಿ 24ನೇ ‘ರೈತ ಸಮಾವೇಶ–2020’

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ 24ನೇ ‘ರೈತ ಸಮಾವೇಶ–2020’ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಫೆ. 23ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾವೇಶದಲ್ಲಿ ಕೃಷಿ ಮಾಹಿತಿ ಶಿಬಿರ ಹಾಗೂ ಆಧುನಿಕ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ, ಸಲಕರಣೆ, ವಿವಿಧ ತಳಿಯ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಳಿಗ್ಗೆ 10ಗಂಟೆಗೆ ಸಮಾವೇಶವನ್ನು ಉದ್ಘಾಟಿಸುವರು ಎಂದರು.
ಕರ್ಣಾಟಕ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿ ಮಹಾಪ್ರಬಂಧಕ ಬಿ. ಗೋಪಾಲಕೃಷ್ಣ ಸಾಮಗ, ರೋಟರಿ ಜಿಲ್ಲಾಧ್ಯಕ್ಷ ಮಂಜುನಾಥ ಉಪಾಧ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಚಿಂತಕ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಮಾಡುವರು ಎಂದರು.
ಅಂದು ಮಧ್ಯಾಹ್ನ 12 ಗಂಟೆಗೆ ಆರಂಭಗೊಳ್ಳುವ ಮೊದಲ ಕೃಷಿ ವಿಚಾರಗೋಷ್ಠಿಯಲ್ಲಿ ‘ಕೀಟ ಮತ್ತು ರೋಗ ನಿರ್ವಹಣಾ ತಾಂತ್ರಿಕತೆ’, ‘ಬೆಳೆ ಪರಿವರ್ತನೆಯಿಂದ ಅಧಿಕ ಇಳುವರಿ’, ‘ವೈಜ್ಞಾನಿಕ ಮಲ್ಲಿಗೆ ಕೃಷಿ’ ಹಾಗೂ ‘ಕಾಳುಮೆಣಸು ಕೃಷಿಯಲ್ಲಿ ನೀರು ನಿರ್ವಹಣೆ’ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ಎರಡನೇ ಗೋಷ್ಠಿಯಲ್ಲಿ ‘ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ’, ‘ಹೊಸ ಭತ್ತದ ತಳಿಗಳು’, ‘ಕಸಿ ಗೇರು ಗಿಡಗಳ ಮಹತ್ವ’ ಹಾಗೂ ‘ಆಹಾರದಿಂದ ಆರೋಗ್ಯ ರಕ್ಷಣೆ’ ವಿಷಯದ ಬಗ್ಗೆ ಸಂಪನ್ಮೂಲ‌ ವ್ಯಕ್ತಿಗಳು ಮಾಹಿತಿ ನೀಡುವರು ಎಂದು ಹೇಳಿದರು.
ಮಧ್ಯಾಹ್ನ 2 ಗಂಟೆಯಿಂದ ಆರಂಭಗೊಳ್ಳುವ ಮೂರನೇ ಗೋಷ್ಠಿಯಲ್ಲಿ ‘ಮಿತವ್ಯಯದ ಹೈನುಗಾರಿಕೆಯಲ್ಲಿ ಸರಳ ತಾಂತ್ರಿಕತೆ’, ‘ಶುದ್ಧ ಹಾಲಿನ ಉತ್ಪಾದನೆ ಮತ್ತು ಬಂಜೆತನ ನಿರ್ವಹಣಾ ಕ್ರಮಗಳು’ ಹಾಗೂ ಔಷಧೀಯ ಬೆಳೆಗಳ ಅಗತ್ಯತೆ’ ವಿಚಾರದ ಕುರಿತು ಸಂಪನ್ಮೂಲ‌ ವ್ಯಕ್ತಿಗಳು ಮಾತನಾಡುವರು. ಮಧ್ಯಾಹ್ನ 3ಗಂಟೆಗೆ ನಡೆಯುವ ನಾಲ್ಕನೇ ಗೋಷ್ಠಿಯಲ್ಲಿ‌ ‘ಕಂದಾಯ ಇಲಾಖೆಯ ಸಮಸ್ಯೆ’, ‘ವಿದ್ಯುತ್‌ ಸಮಸ್ಯೆ’, ‘ತೋಟಗಾರಿಕೆ ಮತ್ತು ಸಹಕಾರಿ ಇಲಾಖೆಯ ಸಾಲ ಮತ್ತು ಸವಲತ್ತುಗಳ ಮಾಹಿತಿ’ ಹಾಗೂ ‘ಮಾರುಕಟ್ಟೆಯ ಸವಾಲು’ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್‌ ಕುದಿ, ಉಪಾಧ್ಯಕ್ಷರಾದ ದಿನೇಶ್‌ ಶೆಟ್ಟಿ ಹೆರ್ಗ, ಶ್ರೀನಿವಾಸ ಬಲ್ಲಾಳ್‌ ಮಲ್ಲಂಪಳ್ಳಿ, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಇದ್ದರು.