ಅಜಿತ್ ಕುಮಾರ್ ಮತ್ತು ವಿಜಯ್ ಅಭಿಮಾನಿಗಳಲ್ಲಿ ಜಟಾಪಟಿ: ಚಿತ್ರದ ಪೋಸ್ಟರ್ ಹರಿದು ಪುಂಡಾಟಿಕೆ

ಚೆನ್ನೈ: ದಕ್ಷಿಣ ಭಾರತದ ತಮಿಳು ಚಿತ್ರ ನಟರಾದ ತಲಾ ಅಜಿತ್ ಕುಮಾರ್ ಮತ್ತು ತಲಪತಿ ವಿಜಯ್ ಅಭಿಮಾನಿಗಳ ಮಧ್ಯೆ ಜಟಾಪಟಿ ನಡೆದಿದ್ದು, ಒಂದು ಬಣ ಮತ್ತೊಂದು ಬಣದ ನಾಯಕಾ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದೆ.

ಎಂಟು ವರ್ಷಗಳ ಬಳಿಕ ಅಜಿತ್ ಕುಮಾರ್ ನಟನೆಯ ‘ಥುನಿವು’ ಮತ್ತು ವಿಜಯ್ ನಟನೆಯ ‘ವಾರಿಸು’ ಒಂದೇ ದಿನದಂದು ಬಿಡುಗಡೆಯಾಗಿದೆ. ತಮಿಳುನಾಡಿನ ಕೋಯಂಬೆಡುವಿನಲ್ಲಿ ಚಿತ್ರಮಂದಿರದ ಎದುರು ಅಭಿಮಾನಗಳ ಸಾಗರ ಜಮಾವಣೆಯಾಗಿದೆ. ಚೆನ್ನೈನ ರೊಹಿಣಿ ಥಿಯೇಟರಿನಲ್ಲಿ ಚಿತ್ರವನ್ನು ನೋಡಲು ಎರಡೂ ಬಣಗಳ ಅಭಿಮಾನಿಗಳು ರಾತ್ರಿಯೆ ಜಮಾಯಿಸಿದ್ದರು.

ಈ ಸಂದರ್ಭ ಅಜಿತ್ ಅಭಿಮಾನಿಗಳು ವಾರಿಸು ಪೋಸ್ಟರ್ ಹರಿದು ಹಾಕಿದ್ದರೆ, ಬಿಜಯ್ ಅಭಿಮಾನಿಗಳು ಥುನಿವು ಪೋಸ್ಟರ್ ಹರಿದಿದ್ದಾರೆ. ಅಭಿಮಾನಿಗಳು ಇನ್ನೊಂದು ಬಣದ ಚಿತ್ರದ ಬ್ಯಾನರ್ ಹೋರ್ಡಿಂಗ್ ಗಳಿಗೂ ಹಾನಿಮಾಡಿದ್ದಾರೆ. ಉದ್ರಿಕ್ತ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಗಿ ಬಂದಿದೆ.

ತಮಿಳುನಾಡಿನಂತೆ ಕರ್ನಾಟಕದಲ್ಲಿಯೂ ಆಗ್ಗಿಂದಾಗ್ಗೆ ಇಂತಹ ಕೆಲವು ಘಟನೆಗಳು ವರದಿಯಾಗುತ್ತಿರುತ್ತವೆ. ಕಿಚ್ಚ ಸುದೀಪ್, ದರ್ಶನ್ ತೂಗುದೀಪ, ಪುನೀತ್ ರಾಜ್ ಕುಮಾರ್ ಮುಂತಾದವರ ಅಭಿಮಾನಿಗಳಲ್ಲಿಯೂ ಈ ರೀತಿಯ ಜಟಾಪಟಿಗಳು ಆಗ್ಗಾಗೆ ಕಂಡುಬರುತ್ತವೆ.