ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಿಂದ ಕೊರೊನಾ ಸಂಕಷ್ಟಕ್ಕೀಡಾದ ಸಣ್ಣ ಉದ್ದಿಮೆದಾರರಿಗೆ ಎಕ್ಸ್‌ಪ್ರೆಸ್ ಸಾಲ ಯೋಜನೆ: ಯಶ್‌ಪಾಲ್ ಸುವರ್ಣ

ಉಡುಪಿ: ಕೊರೊನಾ ಮಹಾಮಾರಿಯ ಪರಿಣಾಮದಿಂದ ವ್ಯವಹಾರಿಕ ಹಿನ್ನಡೆಯಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಿಂದ ಅರ್ಹ ಗ್ರಾಹಕರಿಗೆ ಭದ್ರತೆ ರಹಿತ ಎಕ್ಸ್‌ಪ್ರೆಸ್ ಸಾಲ ಯೋಜನೆ ಜಾರಿಗೊಳಿಸಲಾಗುವುದು ಬ್ಯಾಂಕ್ ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ನೀಡಿದ್ದ 6 ತಿಂಗಳ ಮಾರಟೋರಿಯಂ ಅವಧಿ ಆಗಸ್ಟ್ 31 ಕ್ಕೆ ಅಂತ್ಯಗೊಂಡಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಗ್ರಾಹಕರು ಸಾಲದ ಕಂತು ಪಾವತಿಸಬೇಕಾಗಿದೆ. ಈ ಸಂದರ್ಭದಲ್ಲಿ ಸಣ್ಣ ಉದ್ದಿಮೆದಾರರಿಗೆ, ಮೀನುಗಾರರಿಗೆ ಆರ್ಥಿಕವಾಗಿ ಶಕ್ತಿತುಂಬುವ ನಿಟ್ಟಿನಲ್ಲಿ ಈ ಸಾಲ ಯೋಜನೆ ಆರಂಭಿಸಲಾಗಿದ್ದು, ಈ ಎಕ್ಸ್‌ಪ್ರೆಸ್ ಸಾಲ ಯೋಜನೆಯಲ್ಲಿ ಅರ್ಹ ಗ್ರಾಹಕರಿಗೆ 2 ಲಕ್ಷ ರೂಪಾಯಿ ವರೆಗೆ ಮಾಸಿಕ 1.30% ಬಡ್ಡಿದರದಲ್ಲಿ ಭದ್ರತೆ ರಹಿತವಾಗಿ ಕೇವಲ 180 ನಿಮಿಷದಲ್ಲಿ ಸಾಲ ಮಂಜೂರು ಮಾಡಲಾಗುವುದು ಎಂದು ಹೇಳಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 8 ಶಾಖೆಗಳ ಮೂಲಕ 35 ಸಾವಿರ ಗ್ರಾಹಕರು ವ್ಯವಹಾರ ನಡೆಸುತ್ತಿದ್ದಾರೆ.  ಈ ಸಾಲ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಶಾಖಾ ಪ್ರಬಂಧಕರನ್ನು ಸಂಪರ್ಕಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.