ರೈಲ್ವೆ ಹಳಿ ವಿಸ್ತರಣೆ ಕಾರ್ಯ ಮುಗಿದ ನಂತರ ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್ ವಿಸ್ತರಣೆ ಸಾಧ್ಯತೆ

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನಿಂದ ಕಾಸರಗೋಡಿಗೆ ಚಾಲನೆ ನೀಡಿದ ಕೇರಳದ ಮೊದಲ ವಂದೇ ಭಾರತ್ ರೈಲನ್ನು ಮುಂದಿನ ದಿನಗಳಲ್ಲಿ ಮಂಗಳೂರಿನವರೆಗೆ ವಿಸ್ತರಿಸುವ ಸಾಧ್ಯತೆಯಿದೆ.

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ಬಾವುಟ ತೋರಿದ ನಂತರ ತಮ್ಮ ಭಾಷಣದಲ್ಲಿ, ತಿರುವನಂತಪುರಂ-ಶೋರನೂರು ವಿಭಾಗದಲ್ಲಿ ರೈಲ್ವೆ ಹಳಿ ವಿಸ್ತರಣೆ ಕಾರ್ಯ ಮುಗಿದ ನಂತರ ತಿರುವನಂತಪುರಂ ಮತ್ತು ಮಂಗಳೂರು ನಡುವೆ ಸೆಮಿ ಹೈಸ್ಪೀಡ್ ರೈಲುಗಳನ್ನು ಓಡಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು.

ಸಿಗ್ನಲಿಂಗ್ ವ್ಯವಸ್ಥೆಯನ್ನು ಸುಧಾರಿಸಿದ ನಂತರ ಮತ್ತು ಕೇರಳದ ರೈಲ್ವೆ ಹಳಿಗಳ ತಿರುವುಗಳನ್ನು ನೇರಗೊಳಿಸಿದರೆ, ವಂದೇ ಭಾರತ್ ರೈಲು ತಿರುವನಂತಪುರಂ ಮತ್ತು ಮಂಗಳೂರು ನಡುವೆ ಸಂಚರಿಸಲು ಸಾಧ್ಯವಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದರು.

ಕೇರಳದ ವಂದೇ ಭಾರತ್ ಸೇವೆಯನ್ನು ಮಂಗಳೂರಿನವರೆಗೆ ವಿಸ್ತರಿಸಬೇಕೆಂದು ಈಗಾಗಲೇ ಕಾಂಗ್ರೆಸ್ ಸೇರಿದಂತೆ ವಿವಿಧ ವಲಯಗಳಿಂದ ಬೇಡಿಕೆಯಿದೆ. ಪ್ರಸ್ತುತ, ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ರೈಲು ಸಂಚರಿಸಲು ಸುಮಾರು ಎಂಟು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ಹಳಿಯಲ್ಲಿ ಹೆಚ್ಚಿನ ಸಂಖ್ಯೆಯ ತಿರುವುಗಳಿರುವುದರಿಂದ ಪ್ರಸ್ತುತ ಕೇರಳದಲ್ಲಿ ರೈಲುಗಳು ಗಂಟೆಗೆ ಗರಿಷ್ಠ 90 ಕಿಲೋಮೀಟರ್ (ಕಿಮೀ) ವೇಗದಲ್ಲಿ ಮಾತ್ರ ಚಲಿಸಬಹುದು. ಸಿಗ್ನಲಿಂಗ್ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಸಾಧ್ಯವಾದಷ್ಟು ತಿರುವುಗಳನ್ನು ನೇರಗೊಳಿಸಲು ಈಗಾಗಲೇ 381 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ 18 ರಿಂದ 24 ತಿಂಗಳುಗಳಲ್ಲಿ ರೈಲುಗಳು ಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ. ಇನ್ನು ನಲವತ್ತೆಂಟು ತಿಂಗಳ ನಂತರ, ವೇಗವನ್ನು ಗಂಟೆಗೆ 130 ರಿಂದ 160 ಕಿಮೀ ವರೆಗೆ ಹೆಚ್ಚಿಸಬಹುದು. ಇದು ಪೂರ್ಣಗೊಂಡರೆ ವಂದೇ ಭಾರತ್ ರೈಲು ತಿರುವನಂತಪುರಂ ಮತ್ತು ಮಂಗಳೂರು ನಡುವೆ ಆರು ಗಂಟೆಯ ಕಾಲಾವಧಿಯಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಸಚಿವರು ಹೇಳಿದರು.