ಗೆಜ್ಜೆಗಿರಿ ಕ್ಷೇತ್ರದ ನೂತನ ಯಕ್ಷಗಾನ ಮೇಳಕ್ಕೆ ಪ್ರತಿಭಾ ಕುಳಾಯಿ ಅವರಿಂದ ಜನರೇಟರ್ ಕೊಡುಗೆ

ಮಂಗಳೂರು:  ಬಿಲ್ಲವ ನಾಯಕಿ, ಮಾಜಿ ಕಾರ್ಪೊರೇಟರ್ ಆಗಿ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ವಿಶೇಷವಾದ ಛಾಪನ್ನು ಮೂಡಿಸಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಿನುಗುತ್ತಿರುವ ನಾಯಕಿ, ಅದೆಷ್ಟೋ ಬಡ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿ ಕೊಡುಗೈ ದಾನಿಗಳಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶ್ರೀಮತಿ ಪ್ರತಿಭಾ ಕುಳಾಯಿ ಅವರು ಸೋಣ ಸಂಕ್ರಮಣದ ವಿಶೇಷ ದಿನದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ ಕ್ಷೇತ್ರದ ಶಕ್ತಿ ಸಾನಿಧ್ಯಗಳ ದರ್ಶನ ಪಡೆದು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ ನೂತನ ಯಕ್ಷಗಾನ ಮೇಳದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ಷೇತ್ರದ ಸಾನಿಧ್ಯ ಶಕ್ತಿಗಳ ಕಾರಣೀಕದ ಮಹತ್ವವನ್ನು ಕೊಂಡಾಡಿ,  ಗೆಜ್ಜೆಗಿರಿ ಮೇಳದ ಅಮ್ಮನವರ ಗೆಜ್ಜೆಸೇವೆಗೆ ಸುಮಾರು 3 ಲಕ್ಷ 50 ಸಾವಿರ ಮೊತ್ತದ ಜನರೇಟರ್ ಅನ್ನು ಸೇವಾರೂಪದಲ್ಲಿ ಸಮರ್ಪಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕುಳಾಯಿಯ ತಮ್ಮ ನಿವಾಸ ಕ್ಷೇತ್ರದಲ್ಲಿ ಸ್ಥಳಪುರಾಣ ಕಾರಣಿಕವನ್ನು ಸಾರುವ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” ಗೆಜ್ಜೆ ಸೇವೆಯ ಯಕ್ಷಗಾನ ಪ್ರಸಂಗವನ್ನು ಆಡಿಸುವುದಾಗಿ ತಿಳಿಸಿದ್ದಾರೆ.

ತಮ್ಮ ಕಾರ್ಯಕ್ಷೇತ್ರದಲ್ಲಿ ಗೆಜ್ಜೆಗಿರಿ ಮೇಳದ ಕ್ಯಾಂಪ್ ಬುಕ್ಕಿಂಗ್ ಮಾಡಿಸುವ ಭರವಸೆಯನ್ನು  ಕೊಟ್ಟಿರುವ ಅವರು, ಕ್ಷೇತ್ರದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಆಶ್ವಾಸನೆ ನೀಡದ್ದಾರೆ.

ಮಾತೆ ದೇಯಿಬೈದೆತಿ ಅಮ್ಮನವರ ಗೆಜ್ಜೆ ಸೇವೆಗೆ ಸೇವಾ ರೂಪದಲ್ಲಿ ಸಮರ್ಪಿಸಲಿರುವ ಶ್ರೀಮತಿ ಪ್ರತಿಭಾ ಕುಳಾಯಿ ಅವರಿಗೆ ದೇಯಿಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಮತ್ತು ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪರವಾಗಿ ಧನ್ಯವಾದಗಳು.

ಈ ಹಿಂದೆಯೂ ಕ್ಷೇತ್ರದ ಪುನರುತ್ಥಾನದ ಯೋಜನೆಗೆ ಸಹಕರಿಸಿರುವ ಸೇವೆಯನ್ನು ಸ್ಮರಿಸುತ್ತ ಶ್ರೀಮತಿ ಪ್ರತಿಭಾ ಕುಳಾಯಿ ಅವರ ಜೀವನದ ಮುಂದಿನ ದಿನಗಳು ಸಂತೋಷದಾಯಕವಾಗಿರಲಿ, ವ್ಯಾಪಾರ-ವ್ಯವಹಾರದಲ್ಲಿ ಉತ್ತಮವಾದ ಯಶಸ್ಸನ್ನು ಪಡೆಯಲಿ ಇವರಿಗೆ ಮತ್ತು ಇವರ ಕುಟುಂಬಕ್ಕೆ ಕ್ಷೇತ್ರದ ಸರ್ವ ಶಕ್ತಿಗಳು ನೆಮ್ಮದಿ ಮತ್ತು ಆರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಕ್ಷೇತ್ರದ ವತಿಯಿಂದ ನಮ್ಮ ಹಾರೈಕೆಗಳು ಎಂದು ಗೆಜ್ಜೆಗಿರಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.