ದಕ್ಷಿಣ ಭಾರತದ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅವರು ಕಾಣಿಸಿಕೊಂಡರೆ ಅಭಿಮಾನಿಗಳು ಸೆಲ್ಫಿ, ಆಟೋಗ್ರಾಫ್ಗಾಗಿ ಮುಗಿಬೀಳುತ್ತಾರೆ. ಆದರೆ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನನ್ನತ್ತ ಯಾರೂ ಗಮನ ಕೊಡದೇ ಇದ್ದುದು ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಪುಡಿಮಾಡಿತು ಎಂದು ರಜನಿಕಾಂತ್ ಬಹಿರಂಗಪಡಿಸಿದ್ದಾರೆ.
ಮಂಗಳವಾರ ನಡೆದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರುಜಿ ಅವರ 70ನೇ ಜನ್ಮದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಂಡರು.
“ಒಮ್ಮೆ ಗುರುದೇವರು ಆಶ್ರಮದ ಸುತ್ತಾಟಕ್ಕೆ ನನ್ನನ್ನು ಕರೆದಿದ್ದರು. ನಾನು ಹೋದರೆ ಜನರು ಗುಂಪುಗೂಡಿ ಫೋಟೋ, ಆಟೋಗ್ರಾಫ್ ಕೇಳುತ್ತಾರೆ ಎಂದು ಹೇಳಿದ್ದೆ. ಆದರೆ ಅವರು ‘ಯಾವ ತೊಂದರೆಯೂ ಆಗುವುದಿಲ್ಲ, ಬನ್ನಿ’ ಎಂದರು,”
“ಅಲ್ಲಿ ಸಾವಿರಾರು ಜನರಿದ್ದರು. ತಮಿಳುನಾಡಿನಿಂದ ಬಂದವರನ್ನೂ ನೋಡಿದೆ. ಆದರೆ ನಿಜ ಹೇಳಬೇಕೆಂದರೆ, ಒಬ್ಬನೇ ಒಬ್ಬ ವ್ಯಕ್ತಿಯೂ ನನ್ನತ್ತ ನೋಡಲಿಲ್ಲ. ಫೋಟೋ, ಆಟೋಗ್ರಾಫ್ ಕೂಡ ಕೇಳಲಿಲ್ಲ, ಯಾರೂ ಮಾತನಾಡಲಿಲ್ಲ ಕೂಡ. ನಾನು ಕೈ ಬೀಸುತ್ತಿದ್ದರೂ ಯಾರೂ ಗಮನಿಸಲಿಲ್ಲ. ಆ ಘಟನೆ ನನ್ನ ಅಹಂಕಾರವನ್ನು ಪುಡಿಮಾಡಿತು,” ಎಂದು ಅವರು ಮನದಾಳದ ಅನುಭವ ಹಂಚಿಕೊಂಡಿದ್ದಾರೆ.

















