ಸಂಚಾರಿ ಪೋಲೀಸ್ ಮತ್ತು ಚಾಲಕರಿಗೆ ತುರ್ತು ಪರಿಸ್ಥಿತಿ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ

ಮಣಿಪಾಲ: ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (CCIF) ಮತ್ತು ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಮೇ . 30 ರಂದು ಡಾ. ಟಿಎಂಎ ಪೈ ಹಾಲ್ ನಲ್ಲಿ ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಭಾಗವಹಿಸಿ ಮಾತನಾಡಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ಟ್ರಾಫಿಕ್ ಪೋಲೀಸ್ ಮತ್ತು ಚಾಲಕರನ್ನು ಸಜ್ಜುಗೊಳಿಸುವಲ್ಲಿ ಈ ತರಬೇತಿ ಕಾರ್ಯಕ್ರಮ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ ಎಂದರು.

ರಸ್ತೆಗಳಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಚಾಲಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಮತ್ತು ರಸ್ತೆ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಸಮಯದಲ್ಲಿ ಅವರು ಎದುರಿಸುವ ಸವಾಲುಗಳನ್ನು ಪರಿಹರಿಸಲು ನಿರಂತರ ತರಬೇತಿಯ ಅಗತ್ಯವನ್ನು ಒತ್ತಿ ಹೇಳಿದ ಅವರು ಈ ಪ್ರಮುಖ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ಮಾಹೆ ಮತ್ತು ಕೆಎಂಸಿಗೆ ಧನ್ಯವಾದ ಹೇಳಿದರು.

ಗೌರವ ಅತಿಥಿ ಡಾ. ಶರತ್ ಕೆ ರಾವ್ ಮಾತನಾಡಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಆಳವಾದ ಒಳನೋಟಗಳನ್ನು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಉಳಿಯುವ ಅಚಲ ಬದ್ಧತೆಯನ್ನು ಒತ್ತಿ ಹೇಳಿದರು. ಆರೋಗ್ಯ ಶಿಕ್ಷಣ, ಸಂಶೋಧನೆ ಮತ್ತು ಸಮುದಾಯದ ಒಳಿತಿಗಾಗಿ ಮಾಡುವ ಕಾರ್ಯಗಳಲ್ಲಿ ಮಾಹೆಯ ದೃಷ್ಟಿಕೋನವನ್ನು ತಿಳಿಸಿ ಮಹತ್ವದ ಚಟುವಟಿಕೆ ನಡೆಯಲು ಸಹಕರಿಸಿದ ಉಡುಪಿ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (ಸಿಸಿಐಎಫ್) ಮತ್ತು ಎಮರ್ಜೆನ್ಸಿ ಮೆಡಿಸಿನ್ ವಿಭಾಗಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲಾ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಮತ್ತು ಸಮುದಾಯದ ಯೋಗಕ್ಷೇಮವನ್ನು ಬಲಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದನ್ನು ಶ್ಲಾಘಿಸಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದವರು ಪ್ರಥಮ ಚಿಕಿತ್ಸಾ ತಂತ್ರಗಳು, ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ), ಅಪಘಾತ ನಿರ್ವಹಣೆ ಮತ್ತು ರಸ್ತೆ ಅಪಘಾತಗಳು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ನಿರ್ಣಾಯಕವಾದ ಇತರ ಅಗತ್ಯ ಕೌಶಲ್ಯಗಳನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಸಮಗ್ರ ತರಬೇತಿಯನ್ನು ಪಡೆದರು. ಕಾರ್ಯಾಗಾರವು ಭಾಗವಹಿಸುವವರಿಗೆ ಅನುಭವಿ ವೃತ್ತಿಪರರಿಂದ ಕಲಿಯಲು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಅಪಾಯಗಳನ್ನು ತಗ್ಗಿಸಲು ಮತ್ತು ಅಪಘಾತದ ಸ್ಥಳಗಳಲ್ಲಿ ನಿರ್ಣಾಯಕ ಸಹಾಯವನ್ನು ಒದಗಿಸಲು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಸಂವಾದಾತ್ಮಕ ವೇದಿಕೆಯನ್ನು ಒದಗಿಸಿತು.

ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಸ್ವಾಗತಿಸಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಸಿ ಮಣಿಪಾಲದ ಸಿಸಿಐಎಫ್‌ನ ಸಂಯೋಜಕ ಡಾ.ವಿನೋದ್ ನಾಯಕ್ ವಂದಿಸಿದರು.