ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಜಾರಿ: ಯೋಜನೆಯ ಅರ್ಹತೆ ಮತ್ತು ಮಾನದಂಡಗಳು ಇಂತಿವೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ 5 ಗ್ಯಾರೆಂಟಿ ಜಾರಿಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆದಿದ್ದು, ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಗ್ಯಾರಂಟಿ 1: ಯುವನಿಧಿ ಯೋಜನೆಯಡಿ 2022-23 ರಲ್ಲಿ ವ್ಯಾಸಂಗ ಮಾಡಿ ತೇರ್ಗಡೆ ಹೊಂದಿ ಹೆಸರು ನೋದಾಯಿಸಿಕೊಂಡ ಪಧವೀದರರಿಗೆ ಪ್ರತಿ ತಿಂಗಳೂ 3 ಸಾವಿರ ರೂ ಹಾಗೂ ಡಿಪ್ಲೋಮಾ ಆದವರಿಗೆ 1.500 ಸಾವಿರ ರೂ. 24 ತಿಂಗಳು(2 ವರ್ಷ)ಕಾಲ ಮಾತ್ರ. ಆದರೆ 2 ವರ್ಷದ ಒಳಗೆ ಅಭ್ಯರ್ಥಿಗೆ ಸರ್ಕಾರಿ ಆಥವಾ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿದಲ್ಲಿ ಯೋಜನೆ ಮೊಟಕುಗೊಳ್ಳುತ್ತದೆ. ಅಭ್ಯರ್ಥಿಗಳು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿರಬೇಕು ಮತ್ತು ಯೋಜನೆಗೆ ಅರ್ಜಿಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗ್ಯಾರಂಟಿ 2: ಶಕ್ತಿ ಗ್ಯಾರೆಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್​​ನಲ್ಲಿ ಉಚಿತ ಸಂಚಾರ. ಆದರೆ ಈ ಸಂಚಾರ ರಾಜ್ಯದ ಒಳಗೆ ಮಾತ್ರ ಸೀಮಿತ ಹಾಗೂ ಎಸಿ ಮತ್ತು ಲಕ್ಸುರಿ ಬಸ್​ಗಳಿಗೆ ಅನ್ವಯಿಸುವುದಿಲ್ಲ. ಜೂನ್11ನೇ ತಾರೀಕಿನಿಂದ ಎಲ್ಲಾ ಮಹಿಳೆಯರೂ ಉಚಿತ ಸಂಚಾರ ಕೈಗೊಳ್ಳಬಹುದು.

ಗ್ಯಾರಂಟಿ 3: ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ. ಇದಕ್ಕಾಗಿ ಮಹಿಳೆಯರು ಜೂನ್​ 15 ರಿಂದ ಜುಲೈ 15 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಮನೆ ಯಜಮಾನಿಯಾದವರು ಕಡ್ಡಾಯವಾಗಿ ಆಧಾರ್​ ಕಾರ್ಡ್​​, ಬ್ಯಾಂಕ್​ ಖಾತೆಯ ವಿವರದ ಜೆರಾಕ್ಸ್ ಪ್ರತಿ ನೀಡಬೇಕು. ಎಪಿಎಲ್​ ಮತ್ತು ಬಿಪಿಎಲ್​​ ಕಾರ್ಡ್​ ಹೊಂದಿರುವ ಮಹಿಳೆಯರಿಗೆ ಅನ್ವಯ.

ಗ್ಯಾರಂಟಿ 4: ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಮನೆಗೆ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು. 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುವವರು ಬಿಲ್​ ಕಟ್ಟಬೇಕಾಗಿಲ್ಲ. ಯಾರು ಎಷ್ಟು ವಿದ್ಯುತ್ ಬಳಸುತ್ತಾರೋ ಅವರ ಬಿಲ್ಲಿನ 12 ತಿಂಗಳ ಸರಾಸರಿ ತೆಗೆದುಕೊಳ್ಳಲಾಗುವುದು. 12 ತಿಂಗಳಲ್ಲಿ ಬಳಸಿದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕಹಾಕಿ ಬಿಲ್ ನ ಮೇಲೆ 10% ವರೆಗೆ ಪಾವತಿ ವಿನಾಯತಿ.

ಗ್ಯಾರಂಟಿ 5: ಜುಲೈ 1 ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.