ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಹೊಸ ಮನೆ ‘ವಲ್ಮೀಕ’ ದ ಅದ್ದೂರಿ ಗೃಹಪ್ರವೇಶ

ಬೆಂಗಳೂರು: ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತಿರುವ ಸಹೃದಯ ವ್ಯಕ್ತಿತ್ವದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹಪ್ರವೇಶ ಭಾನುವಾರದಂದು ಬಹಳ ಅದ್ದೂರಿಯಾಗಿ ನೆರವೇರಿದೆ.

ಮನೆಯ ದ್ವಾರದಲ್ಲೇ ಸಿಂಹದ ಕಂಚಿನ ಪ್ರತಿಮೆ ವಿಷ್ಣುರವರಿಗೆ ಸಮರ್ಪಿತವಾಗಿದ್ದು ಎಲ್ಲರನ್ನೂ ಸ್ವಾಗತಿಸುತ್ತಿದೆ. ಮುಂಭಾಗದಲ್ಲಿ ಕೃಷ್ಣನ ಬೆಳ್ಳಿಯಿಂದ ಅಲಂಕೃತ ಮೂರ್ತಿಯನ್ನಿಡಲಾಗಿದೆ.

ಜಯನಗರದ 4ನೇ ಟಿ ಬ್ಲಾಕ್ ನಲ್ಲಿ ನಿರ್ಮಾಣವಾಗಿರುವ ಈ ಮನೆಗೆ ‘ವಲ್ಮೀಕ’ ಎಂದು ಹೆಸರಿಡಲಾಗಿದೆ. ನೂತನ ಗೃಹದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಶುಭ ಹಾರೈಸಿದರು.

Image

ಹಾಗೆಯೇ ಚಿತ್ರರಂಗ, ಕಿರುತೆರೆ ಹಾಗೂ ಇತರ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭ ಹಾರೈಸಿದರು. 1976ರಲ್ಲಿ ವಿಷ್ಣುವರ್ಧನ್ ರವರು ಈ ಜಾಗವನ್ನು ಖರೀದಿಸಿದ್ದರು. ಕಳೆದ ಮೂರು ವರ್ಷದಿಂದ ಹೊಸ ಮನೆಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದೆ. ಇದೀಗ ಹೊಸಮನೆಗೆ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ, ಅಳಿಯ ಅನಿರುದ್ದ್, ಮೊಮ್ಮಕ್ಕಳ ಸಮೇತವಾಗಿ ಪ್ರವೇಶಿಸಿದ್ದಾರೆ.