ಕೊರೊನಾ ಸೋಂಕು ಕಡಿಮೆಯಾಗೋವರೆಗೆ ಶಾಲೆ ಮಾಡಲೇಬೇಡಿ: ಶಾಲೆ ಆರಂಭಕ್ಕೆ ಪೋಷಕರ ಖಢಕ್ ವಿರೋಧ!

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಹೆಚ್ಚುತ್ತಿದ್ದು, ಈ ಮಧ್ಯೆ ಪ್ರಾಥಮಿಕ, ಪ್ರೌಢಶಾಲೆ ಆರಂಭಿಸುವ ಪ್ರಸ್ತಾವವನ್ನು ಶಿಕ್ಷಣ ಇಲಾಖೆ ಮುಂದಿಟ್ಟಿರುವುದು ಸಾರ್ವಜನಿಕರು, ಪೋಷಕರು ಹಾಗೂ ಶಿಕ್ಷಕರಿಂದ ವಿರೋಧ ವ್ಯಕ್ತವಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಈ ನಡೆಗೆ ಭಾರಿ ವಿರೋಧವಾದ ಅಭಿಪ್ರಾಯಗಳು ಹೆಚ್ಚಿದ್ದು, ಮಕ್ಕಳನ್ನು ಪ್ರಯೋಗಕ್ಕೆ ಒಳಪಡಿಸಬೇಡಿ ಎಂದು ಹಲವರು ಮನವಿ ಮಾಡಿದ್ದಾರೆ.

ಡಿಜಿಟಲ್‌ ಸಹಿ ಸಂಗ್ರಹ ಅಭಿಯಾನ:
ಮಕ್ಕಳಿಗೆ ಜುಲೈ ತಿಂಗಳಲ್ಲಿ ಶಾಲೆ ಆರಂಭಿಸುವುದು ಮೂರ್ಖ ನಿರ್ಧಾರ ಎಂದು ಕೆಲವರು ಪ್ರತಿಪಾದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣ ಕಡಿಮೆ ಆಗುವವರೆಗೂ ಅಥವಾ ಔಷಧ ಕಂಡುಹಿಡಿಯುವವರೆಗೆ ಶಾಲೆ ಬೇಡ’ ಎಂಬ ಡಿಜಿಟಲ್‌ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದ್ದು, ಒಟ್ಟು 5 ಲಕ್ಷ ಸಹಿ ಸಂಗ್ರಹಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಕಳುಹಿಸಿ ತಮ್ಮ ಸಮೂಹ ಅಭಿಪ್ರಾಯವನ್ನು ಈ ಮೂಲಕ ನಿರ್ಧರಿಸಿದ್ದಾರೆ.

ರಾಜ್ಯದಲ್ಲಿ ಶಾಲೆ ಆರಂಭದ ದಿನಾಂಕ ಪ್ರಕಟಿಸಿ ಪೋಷಕರ ಅಭಿಪ್ರಾಯ ಕೇಳುವುದರಲ್ಲಿ ಅರ್ಥವಿಲ್ಲ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದೆ. ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಳ್ಳದೆ ಜುಲೈ 1ರಿಂದ ಶಾಲೆ ಆರಂಭಿಸುವುದಕ್ಕೆ ನಮ್ಮ ಸಮ್ಮತಿ ಇಲ್ಲ’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಶಿಕ್ಷಣ ಸಚಿವ‌ ಸುರೇಶ್ ಕುಮಾರ್‌ ಅವರಿಗೆ ಪತ್ರ ಬರೆದಿರುವ ಮಾಜಿ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಸದ್ಯ ಶಾಲೆ ಆರಂಭಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ರಘು ಆಚಾರ್ ಕೊರೊನಾ ಸೋಂಕು ನಿಯಂತ್ರಣ ಬರುವವರೆಗೆ ಶಾಲೆ ಆರಂಭ ಬೇಡ ಎಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಹಾಗೂ ಇನ್ನೂ ಇತರರು ಪತ್ರ ಬರೆಯುವ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.