ಮಂಗಳೂರು: ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 26ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 21ರಂದು ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವೈವಿಧ್ಯ ಭಾರತದಲ್ಲಿ ಪ್ರೀತಿಯ ಸೆಲೆಗಳು ಎಂಬ ವಿಷಯದಲ್ಲಿ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಚಾರ ಸಂಕಿರಣದ ಉದ್ಘಾಟನೆಯನ್ನು ನಾಡಿನ ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟುರವರು ನೆರವೇರಿಸಲಿದ್ದು, ವಿಷಯ ಮಂಡನೆಯನ್ನು ಖ್ಯಾತ ಸಾಹಿತಿ, ಬರಹಗಾರ ಡಾ. ಕೆ.ಶೆರೀಫಾರವರು ಮಾಡಲಿದ್ದಾರೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕೆ.ಅಶ್ರಫ್ ಪ್ರತಿಕ್ರಿಯೆ ನೀಡಲಿದ್ದಾರೆ.
ಉದ್ಘಾಟನಾ ಸಮಾರಂಭದ ಮೊದಲು 9.30ಕ್ಕೆ ಏಕತಾರಿ ಹಾಡುಗಾರ ನಾದಾ ಮಣಿನಾಲ್ಕೂರು ಬಳಗ ಹಾಗೂ ಜನಪ್ರೀತಿ ಬಳಗದವರಿಂದ ಪ್ರೀತಿಯ ಸಿಂಚನ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರೀತಿ ಹಾಗೂ ಸೇವೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದ ಜಗತ್ತಿನ ಮಹಾತಾಯಿ ಸಂತ ಮದರ್ ತೆರೇಸಾರವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಯುವಪೀಳಿಗೆಯ ಮಧ್ಯೆ ಕೊಂಡೊಯ್ಯವ ಸಲುವಾಗಿ 2017ರಲ್ಲಿ ಜನ್ಮ ತಾಳಿದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಿಚಾರ ಸಂಕಿರಣ,ಸಂವಾದ,ಸೌಹಾರ್ದ ಹಬ್ಬಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸರ್ವ ಧರ್ಮದ ಜನತೆಯ ಪ್ರೀತಿ ವಿಶ್ವಾಸಗಳನ್ನು ಗಳಿಸಿದೆ. ಮಾತ್ರವಲ್ಲದೆ ಮಾನವೀಯ ಹೃದಯಗಳನ್ನೊಳಗೊಂಡ ಜಾತ್ಯಾತೀತರ ಹಾಗೂ ಸೌಹಾರ್ದ ಕೂಟವಾಗಿ ಹೊರಹೊಮ್ಮಿದೆ. ನಗರದ ಖ್ಯಾತ ವಿಚಾರವಾದಿಗಳು, ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರು, ಉದ್ಯಮಿಗಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ದಲಿತ, ಆದಿವಾಸಿ, ಮಧ್ಯಮ ವರ್ಗದ ನೌಕರರ ಸಂಘಟನೆಗಳ ಮುಖಂಡರು ಸೇರಿದಂತೆ ಸರ್ವ ಧರ್ಮದ 120ರಷ್ಟು ಗಣ್ಯಾತಿಗಣ್ಯರು ಈ ವೇದಿಕೆಯಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡು ಸಕ್ರಿಯರಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಇನ್ನಷ್ಟು ಮುತುವರ್ಜಿಯಿಂದ ನಡೆಸುವ ಮೂಲಕ ಮಂಗಳೂರಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವುದೇ ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ಮೂಲ ಆಶಯವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್ ಸಂತ ಮದರ್ ತೆರೇಸಾ
ಡೋಲ್ಫಿ ಡಿಸೋಜ, ಆಲ್ವಿನ್ ಡಿಸೋಜ, ಮುನೀರ್ ಕಾಟಿಪಳ್ಳ, ಸ್ಟಾನಿ ಡಿ ಕುನ್ನಾ ಉಪಸ್ಥಿತರಿದ್ದರು.












