ಜಿಲ್ಲಾ ಬಾಲಭವನ ಸಮಿತಿ ಸಭೆ

ಉಡುಪಿ: ರಾಜ್ಯ ಬಾಲಭನವ ಸೊಸೈಟಿ (ರಿ) ಅಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಗುರುವಾರ ನಗರದ ರಜತಾದ್ರಿಯ ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಬಾಲಭವನ ಸಮಿತಿ ಸಭೆ ನಡೆಯಿತು.

ಮಕ್ಕಳಲ್ಲಿ ಕುತೂಹಲ ಮೂಡಿಸುವುದರೊಂದಿಗೆ, ಆಧುನಿಕತೆಗೆ ಪೂರಕವಾದ ನಾವೀನ್ಯತೆಯ ಚಟುವಟಿಕೆಗಳನ್ನು ಜಿಲ್ಲಾ ಹಾಗೂ ತಾಲೂಕು ಬಾಲಭವನದಲ್ಲಿ ಹಮ್ಮಿಕೊಳ್ಳುವಂತೆ ತಿಳಿಸಿದರು.

ಹೊರಸಂಚಾರ ಕಾರ್ಯಕ್ರಮದಡಿ ತಾರಾಲಯ, ವಸ್ತು ಸಂಗ್ರಹಾಲಯ, ಸಾಮಾಜಿಕ ಮೌಲ್ಯಗಳನ್ನು ಅರಿಯುವಂತಹ ತಾಣಗಳಿಗೆ ಮಕ್ಕಳನ್ನು ಕರೆದೊಯ್ಯುವಂತೆ ತಿಳಿಸಿದ ಅವರು, ತಾರಸಿ ತೋಟಗಾರಿಕೆ, ಪ್ರಥಮ ಚಿಕಿತ್ಸೆ, ಹಾವು ಕಡಿತಕ್ಕೊಳಗಾದವರಿಗೆ ಚಿಕಿತ್ಸೆ, ವಯೋವೃದ್ಧರ ಆರೈಕೆ ಮುಂತಾದವುಗಳನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಪಿ.ಆರ್.ಇ.ಡಿ ಇ.ಇ. ಜನಾರ್ಧನ, ಡಿಡಿಪಿಐ ಗಣಪತಿ ಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಹೆಚ್ ಕೃಷ್ಣಪ್ಪ ಸ್ವಾಗತಿಸಿ, ಕುಮಾರ ನಾಯ್ಕ್ ವಂದಿಸಿದರು.