ಶಾಲಾ ಮಕ್ಕಳಿಗೆ ಉಚಿತ ಅಪಘಾತ ವಿಮೆ ವಿತರಣೆ

ಉಡುಪಿ: ಕಡಿಯಾಳಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ಸಂಯೋಜನೆಯಲ್ಲಿ ಜೆಸಿಐ ಉಡುಪಿ ಸಿಟಿ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ಅಪಘಾತ ವಿಮೆ ವಿತರಣಾ ಕಾರ್ಯಕ್ರಮ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಾಯ ವಿ.ಜಿ. ಬೈಕಾಡಿ (ವಿಠ್ಠಲ ಗಿರಿ ರಾವ್) ನನ್ನ ನಿವೃತ್ತಿ ಸಮಯದಲ್ಲಿ ವಿಮಾ ರಕ್ಷಣೆ ಒದಗಿಸುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ನಿವೃತ್ತ ಶಿಕ್ಷಕ ಲಕ್ಷ್ಮೀನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಶಾಲೆ 149 ವರ್ಷದ  ಇತಿಹಾಸ ಇದೆ. ಇಲ್ಲಿ ಓದಿದ ಮಕ್ಕಳು ಅತ್ಯುನ್ನತ ಉದ್ಯೋಗದಲ್ಲಿ ಇದ್ದಾರೆ. ವಿದ್ಯಾರ್ಥಿಗಳಿಗೆ ವಿಮಾ ರಕ್ಷಣೆ ನೀಡಲು ಹಳೆ ವಿದ್ಯಾರ್ಥಿ ಸಂಘ ಮುಂದೆ ಬಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡವೂರು ವಾಡಿ೯ನ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಜತೆಗೆ ಸಂಸ್ಕಾರವೂ ಮುಖ್ಯ. ಹೀಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಜೆಸಿಐ ಉಡುಪಿ ಸಿಟಿಯ ಅಧ್ಯಕ್ಷ ಹಾಗೂ ಸ್ಟಾರ್ ಹೆಲ್ತ್ & ಅಲೈಡ್ ಇನ್ಶೂರೆನ್ಸ್ ಕಂಪನಿಯ ಮಾರಾಟ ವಿಭಾಗ ಸೀನಿಯರ್ ಮ್ಯಾನೇಜರ್ ಉದಯ ನಾಯ್ಕ್ ಮಾತನಾಡಿ, ಆರೋಗ್ಯ ಮತ್ತು ಅಪಘಾತ ವಿಮಾ ರಕ್ಷಣೆ ಅವಶ್ಯಕತೆ, ಅನಿವಾರ್ಯತೆ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಮೃತರಾದ ಪಿ ರಾಘವೇಂದ್ರ ಆಚಾರ್ಯ ಅವರ ರೂ 1,01,85,000 (ಒಂದು ಕೋಟಿಯ ಒಂದು ಲಕ್ಷದ 85 ಸಾವಿರ) ವಿಮಾ ಮೊತ್ತವನ್ನು ಅವರ ಪತ್ನಿಗೆ ಹಸ್ತಾಂತರಿಸಲಾಯಿತು.

ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಮಲತಾ , ಉಡುಪಿ  ನಗರಸಭಾ ಮಾಜಿ ಉಪಾಧ್ಯಕ್ಷೆ ಪ್ರತಿನಿಧಿ ಭಾರತಿ ಚಂದ್ರಶೇಖರ್, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವಿ ಸಾಲಿಯಾನ್,  ಸ್ಟಾರ್ ಹೆಲ್ತ್ ಪ್ರತಿನಿಧಿಗಳಾದ ರಕ್ಷಿತ್ ಕುಮಾರ್ ವಂಡ್ಸೆ, ಸುಜಾತ ಪ್ರಕಾಶ್ ಕಡಿಯಾಳಿ ಉಪಸ್ಥಿತರಿದ್ದರು.

ಸುಮಾರು 200ಕ್ಕೂ ಹೆಚ್ಚು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದರು. ಸುಮಾರು 150 ವಿದ್ಯಾರ್ಥಿಗಳಿಗೆ ತಲಾ 77 ಸಾವಿರದ ಅಪಘಾತ ಸೌಲಭ್ಯದ ಇನ್ಸೂರೆನ್ಸ್ ಕಾರ್ಡನ್ನು ವಿತರಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ಯಾ ಶ್ಯಾಂ ಸುಂದರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಧ್ಯಾಪಕ ಚಂದ್ರಶೇಖರ ನಾಯ್ಕ್ ವಂದಿಸಿದರು.