ಕೆಎಂಸಿಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಕ್ಕೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ ಏ.17: ಮಣಿಪಾಲದ ಕೆಎಂಸಿ ಯಲ್ಲಿ  ಕೋವಿಡ್ ಪರೀಕ್ಷಾ ಲ್ಯಾಬ್ ತೆರೆಯುವ ಬಗ್ಗೆ ಕೇಂದ್ರದ ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಸಂಸದೆ ಶೋಭಾ ಕರಂದ್ಲಾಜೆ  ತಿಳಿಸಿದ್ದಾರೆ.

ಅವರು ಶುಕ್ರವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭಿಸುವುದರಿಂದ ತ್ವರಿತವಾಗಿ, ಕೋವಿಡ್ ಪರೀಕ್ಷಾ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ ಅಲ್ಲದೇ ಜಿಲ್ಲೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆ ನಡೆಸಲು ಸಾಧ್ಯವಾಗಲಿದೆ, ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಅನುಮತಿಗೆ ಪ್ರಯತ್ನಿಸುವುದಾಗಿ ತಿಳಿಸಿದ ಸಂಸದೆ ಶೋಭಾ, ಜಿಲ್ಲೆಯಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯದಲ್ಲಿ  ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ  ಸೂಚಿಸಿದರು.

ಮಣಿಪಾಲದ ಕೆಎಂಸಿ ಗೆ ತುರ್ತು ಚಿಕಿತ್ಸೆಗೆ ಆಗಮಿಸುವ ಹೊರಜಿಲ್ಲೆಗಳ ರೋಗಿಗಳಿಗೆ ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ  ಹಾಗೂ ರೋಗಿಗಳ ಜೊತೆಯಲ್ಲಿ  ಕೇವಲ ಒಬ್ಬರು ಅಥವಾ ಅನಿವಾರ್ಯವಿದ್ದಲ್ಲಿ  ಗರಿಷ್ಠ ಇಬ್ಬರು ಸಹಾಯಕರು ಮಾತ್ರ  ಬರುವು ಕುರಿತಂತೆ  ನಿಯಮ ಮಾಡುವಂತೆ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಯಾವುದೇ ಕೊರತೆಯಾದಗಂತೆ,  ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದೆ ಸೂಚಿಸಿದರು.

ಹೂವಿನ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ  ಶಾಸಕ ರಘುಪತಿಭಟ್ ಹಾಗೂ ಮರಣ ಸಂದರ್ಭದಲ್ಲಿ ಪ್ರಯಾಣಿಸಲು ಶೀಘ್ರದಲ್ಲಿ ಅನುಮತಿ ನೀಡುವಂತೆ ಶಾಸಕ ಲಾಲಾಜಿ ಮೆಂಡನ್ ಕೋರಿದರು.

ಜಿಲ್ಲೆಯಲ್ಲಿ  ಸಂಕಷ್ಠದಲ್ಲಿರುವ  ಸಾರ್ವಜನಿಕರನ್ನು ಜಿಲ್ಲಾಡಳಿದ ಮೂಲಕ ಗುರುತಿಸಿ ಈಗಾಗಲೇ ಮೊದಲ ಹಂತದಲ್ಲಿ 5,388 ಆಹಾರದ ಕಿಟ್ ಗಳನ್ನು ವಿತರಿಸಲಾಗಿದ್ದು, 658 ನಿರಾಶ್ರಿತರಿಗೆ ಶೆಲ್ಟೆರ್ ರೂಂ ಗಳಲ್ಲಿ ಅಗತ್ಯ ವ್ಯವಸ್ಥೆ ಒದಗಿಸಿದ್ದು, ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ,  2 ನೇ ಹಂತದಲ್ಲಿ ಈಗಾಗಲೇ 5000 ಮಂದಿಗೆ ಜಿಲ್ಲೆಯ ವಿವಿಧ ದೇವಾಲಯಗಳ ಮೂಲಕ  ಆಹಾರದ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ , ಸಂಬಂಧ ಪಟ್ಟ ತಹಸೀಲ್ದಾರ್ ಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು , ಜಿಲ್ಲೆಯಲ್ಲಿ  ಔಷಧಗಳ ದಾಸ್ತಾನು ಇದ್ದು, ಕೊರತೆ ಇಲ್ಲ, ಇನ್ಫೋಸಿಸ್, ಡಾ.ಜಿ.ಶಂಕರ್ ಸೇರಿದಂತೆ ವಿವಿಧ ದಾನಿಗಳ  ನೆರವಿನಿಂದ ವೈದ್ಯಕೀಯ ಸಲಕರಣೆಗಳು ನೆರವು ದೊರೆತಿದೆ, ಪಾರ್ಲೆ ಜಿ ಅವರಿಂದ 4 ಲಕ್ಷ ಬಿಸ್ಕೆಟ್ ಪ್ಯಾಕ್ ಗಳ ಪೂರೈಕೆ ಸಹ ಬರಲಿದೆ  ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ದಿನನಿತ್ಯದ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 7 ರಿಂದ 11 ರ ವರೆಗೆ  ಸಮಯ ನಿಗಧಿಪಡಿಸಿದ್ದು, ಈ ಅವಧಿಯಲ್ಲಿ ಹೂ ಮಾರಾಟ ಮಾಡಬಹುದಾಗಿದೆ ಹಾಗೂ ಮರಣದ ಸಂದರ್ಭದಲ್ಲಿ ಪ್ರಯಾಣಕ್ಕೆ ಅನುಮತಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ 19 ದಿನಗಳಿಂದ ಕೊರೋನಾ ಪಾಸಿಟಿವ್ ಕಂಡು ಬಂದಿಲ್ಲವಾಗಿದ್ದು, 28 ದಿನಗಳಾದಲ್ಲಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬರಲಿದೆ , ಜಿಲ್ಲೆಯ ಒಳಗೆ ಕೊರೋನಾ  ಕಂಡು ಬರುವ ಸಾಧ್ಯತೆಗಳ ಕಡಿಮೆ ಇದ್ದು, ಹೊರಗಿನಿಂದ ಮಾತ್ರ ಬರುವ ಸಾಧ್ಯತೆಗಳಿರುವುದರಿಂದ  ಜಿಲ್ಲೆಯ ಗಡಿಗಳನ್ನು ಅತ್ಯಂತ ಬಿಗಿಗೊಳಿಸಲಾಗಿದೆ, ಜಿಲ್ಲೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವವರ ಯಾವುದೇ ಒತ್ತಡಗಳಿಗೆ, ಜಿಲ್ಲೆಯ ನಾಗರೀಕರ ಆರೋಗ್ಯ ದೃಷ್ಠಿಯಿಂದ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲೆಯಿಂದ ಪರೀಕ್ಷೆಗೆ ಕಳುಹಿಸಿದ್ದ 409 ವರದಿಗಳಲ್ಲಿ ಇಂದು 394 ವರದಿಗಳು ನೆಗೆಟಿವ್ ಬಂದಿದು, 15 ಮಾತ್ರ ಬಾಕಿ ಇವೆ, ಒಬ್ಬ ಕೊರೋನಾ ರೋಗಿ ಮಾತ್ರ ಜಿಲ್ಲೆಯಲ್ಲಿದ್ದು, ಭಟ್ಕಳದ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆ ಇದೆ ಎಂದು ಜಿಲ್ಲಾ ಕೊರೋನಾ ನೋಡೆಲ್ ಅಧಿಕಾರಿ ಡಸ ಪ್ರಶಾಂತ್ ಭಟ್ ಮಾಹಿತಿ ನೀಡಿದರು.

ಸಭೆಯಲ್ಲಿ, ಕರಾವರಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಈಲ್ಲೆಯ ಎಲ್ಲಾ ತಹಸೀಲ್ದಾರ್ ಗಳು, ಅರೋಗ್ಯ ಇಲಾಖೆಯ ಅಧಿಕಾರಿಗಳು, ಕೊರೋನಾ ನಿಯಂತ್ರಣ ರಚಿಸಿರುವ ವಿವಿಧ ಸಮಿತಿಗಳ ಮುಖ್ಯ ಅಧಿಕಾರಿಗಳು ಉಪಸ್ಥಿತರಿದ್ದರು.