ಧರ್ಮಸ್ಥಳ: ಮೃತದೇಹಗಳ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಯಂತ್ರ ಬಳಸಿ; ಸುಜಾತಾ ಭಟ್ ವಕೀಲರ ಆಗ್ರಹ

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯಾಧುನಿಕ GROUND PENETRATING RADAR (ಗೌಂಡ್ ಪೆನೇಟ್ರೇಟಿಂಗ್ ರೇಡಾರ್- ಜಿಪಿಆರ್) ಗಳನ್ನು ಬಳಸುವಂತೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಎಂಬವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಸಾಕ್ಷಿ-ದೂರುದಾರ ಈಗಾಗಲೇ ತೋರಿಸಿ ಅಗೆಸಿರುವ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ GROUND PENETRATING RADAR ಅನ್ನು ಬಳಸಿ ಕಳೇಬರಗಳ ಪತ್ತೆ ಕಾರ್ಯಾಚರಣೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ ಮನವಿ ಮಾಡಿದ್ದಾರೆ.ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ದೂರುದಾರ ತೋರಿರುವ 10 ಸ್ಥಳಗಳಲ್ಲಿ ಅಗೆದಾಗ ಕೆಲವು ಸ್ಥಳಗಳಲ್ಲಿ ಕಳೇಬರಗಳು ಪತ್ತೆಯಾಗಿವೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

ಸಾಕ್ಷಿಯೇ ಹೇಳಿರುವಂತೆ, ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿದ್ದಾನೆ. ಅಪಾರ ಮಳೆಯನ್ನು ಕಾಣುವ ಧರ್ಮಸ್ಥಳ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೇ, ಹಾಗೂ ಸುಮಾರು 11 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಕಾರಣಕ್ಕೆ ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟುಕೊಂಡ ಗುರುತುಗಳಲ್ಲಿ ಬದಲಾವಣೆಯಾಗಿರುವ ಸಾಧ್ಯತೆಯೂ ಅಧಿಕವಾಗಿದೆ. ಆದ್ದರಿಂದ, ನಾವು ಈಗಾಗಲೇ (ಜುಲೈ 29ರಂದು) ಮನವಿ ಮಾಡಿಕೊಂಡಂತೆ, ಸದ್ಯ ಅಗೆಯಲಾಗಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಅತ್ಯಾಧುನಿಕ GROUND PENETRATING RADAR (ಜಿಪಿಆರ್) ಗಳನ್ನು ಬಳಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಹುಲ್ಲುಕಡ್ಡಿಯನ್ನು ತೆರವುಗೊಳಿಸಲು ಉಪಯೋಗಿಸುವ ಯಂತ್ರದಷ್ಟು ಗಾತ್ರವಿರುವ ಈ ಜಿಪಿಆರ್ ಗಳನ್ನು ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಬಳಸಬಹುದು. ಆದ್ದರಿಂದ ದೂರುದಾರ ಗುರುತಿಸಿರುವ ಜಾಗಗಳ ಪೈಕಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಜಿಪಿಆರ್ ಬಳಸಬೇಕು ಎಂದು ವಕೀಲ ಮಂಜುನಾಥ್ ಎನ್. ಒತ್ತಾಯಿಸಿದ್ದಾರೆ.