ಉಡುಪಿ: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪಾದರಾವ್, ಸಾತ್ವಿಕ್, ಶ್ರೀಶಾ ಹಾಗೂ ಕೃಷ್ಣ ಹೆಬ್ಬಾರ್ ಇವರು ಶ್ರೀಮತಿ ಅಕ್ಷತಾ ರಾವ್ ಎಲ್ ಮತ್ತು ಡಾ. ಗಣೇಶ್ ಶ್ರೀನಿವಾಸ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕಾಲ್ನಡಿಗೆಯ ಒತ್ತಡದಿಂದ ವಿದ್ಯುತ್ ಉತ್ಪಾದಿಸುವ ಸ್ಮಾರ್ಟ್ ಎನರ್ಜಿ ಹಾರ್ವೆಸ್ಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.
ದೈನಂದಿನ ಮಾನವ ಚಟುವಟಿಕೆಗಳಿಂದ ಉಂಟಾಗುವ ಶಕ್ತಿಯನ್ನು ನವೀಕರಿಸಬಹುದಾದ ಇಂಧನದ ಮೂಲವಾಗಿ ಬಳಸಿಕೊಂಡು ಸುಸ್ಥಿರ ಇಂಧನ ಪರಿಹಾರಗಳು ಹಾಗೂ ಸ್ಮಾರ್ಟ್ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ವ್ಯವಸ್ಥೆಯು ವ್ಯಕ್ತಿಗಳು ನಡೆಯುವಾಗ ಉಂಟಾಗುವ ಯಾಂತ್ರಿಕ ಒತ್ತಡವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ ಮತ್ತು ವಿದ್ಯುತ್ಶಕ್ತಿಯನ್ನು ಸಂಗ್ರಹಿಸಿ ಕಡಿಮೆ ವಿದ್ಯುತ್ ಅಗತ್ಯವಿರುವ ವಿವಿಧ ಉಪಕರಣಗಳಿಗೆ ಬಳಸಬಹುದಾಗಿದೆ. ಈ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಪೈಝೋ ಎಲೆಕ್ಟ್ರಿಕ್ ಸಂವೇದಕಗಳನ್ನು ಅಳವಡಿಸಲಾಗಿದೆ.
ಈ ತಂತ್ರಜ್ಞಾನವು ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ವಾಣಿಜ್ಯ ಮಳಿಗೆಗಳು, ಶಿಕ್ಷಣ ಸಂಸ್ಥೆಗಳ ಆವರಣಗಳು, ಮೆಟ್ಟಿಲುಗಳು ಹಾಗೂ ಪಾದಾಚಾರಿ ಮಾರ್ಗಗಳಂತಹ ಹೆಚ್ಚಿನ ಜನಸಂಚಾರವಿರುವ ಸ್ಥಳಗಳಲ್ಲಿ ಅಳವಡಿಸಲು ಅಪಾರ ಸಾಧ್ಯತೆಯನ್ನು ಹೊಂದಿದೆ.
ಉತ್ಪಾದಿತ ಶಕ್ತಿಯನ್ನು ಇಂಟರ್ ನೆಟ್ ಆಫ್ ಥಿಂಗ್ಸ್ ಸಾಧನಗಳು, ಸ್ಮಾರ್ಟ್ ಸಂವೇದಕಗಳು ಹಾಗೂ ಇತರ ಕಡಿಮೆ ವಿದ್ಯುತ್ ಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಬಳಸಬಹುದಾಗಿದ್ದು ಸಾರ್ವಜನಿಕ ಸ್ಥಳಗಳ ಇಂಧನ ದಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಈ ಯೋಜನೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಅನುದಾನವನ್ನು ಪಡೆದಿದೆ.

















