ವಾಮಂಜೂರು: ತಿರುವೈಲುಗುತ್ತು ಸಂಕುಪೂಂಜ-ದೇವಪೂಂಜ ಜೋಡುಕೆರೆ ಕಂಬಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗಿ

ವಾಮಂಜೂರು: 12ನೇ ವರ್ಷದ ತಿರುವೈಲೋತ್ಸವದ ಅಂಗವಾಗಿ ವಾಮಂಜೂರಿನ ತಿರುವೈಲುಗುತ್ತು ಸಂಕುಪೂಂಜ-ದೇವಪೂಂಜ ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶನಿವಾರ ಪಾಲ್ಗೊಂಡರು.

ಕಂಬಳ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಕಾಪಾಡಿಕೊಂಡು ಬಂದಿರುವ ನಿಮಗೆ ಈಶ್ವರ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ತುಳುನಾಡಿನ ಪವಿತ್ರವಾದ ಭೂಮಿ. ಸರ್ವಜನಾಂಗದ ಶಾಂತಿಯ ತೋಟವಾಗಿ ಈ ಭೂಮಿಗೆ ವಿಶೇಷ ಶಕ್ತಿ ಇದೆ. ಇದು ವಿದ್ಯಾ ಕ್ಷೇತ್ರ, ಆರ್ಥಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಎಲ್ಲಾ ರಂಗದಲ್ಲೂ ಉದ್ಯೋಗ ಸೃಷ್ಟಿಸುವ ಪವಿತ್ರ ಭೂಮಿ. ಈ ಭೂಮಿಯಲ್ಲಿ ನಮ್ಮ ನಾಡಿನ ಕ್ರೀಡೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಲಾಗಿದೆ. ಈ ಭಾಷೆ, ಸಂಸ್ಕೃತಿ ರಾಜ್ಯಕ್ಕೆ ಮೆರುಗು ನೀಡಿದೆ ಎಂದರು.

ನಾನು ಇಂದು ಕಂಬಳ ವೀಕ್ಷಣೆ ಮಾಡಿ, ಇದರ ಅಭಿಮಾನಗಳಿಗೆ, ಆಯೋಜಕರಿಗೆ ಹಾಗೂ ಪ್ರೋತ್ಸಾಹ ನೀಡುವವರಿಗೆ ಶುಭ ಹಾರೈಸಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಈ ವರ್ಷ ನಾನು ಉಪಮುಖ್ಯಮಂತ್ರಿಯಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡ ನಂತರ ಇದನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಪ್ರೋತ್ಸಾಹವನ್ನು ನಾವು ಸದಾ ಮುಂದುವರಿಸುತ್ತೇವೆ. ಈ ಕಂಬಳ ಕ್ರೀಡೆ ದೇಶಕ್ಕೆ ಹಿರಿಮೆಯಾಗಿದೆ. ವಿಶ್ವಮಟ್ಟದಲ್ಲಿ ಈ ಕ್ರೀಡೆ ಗುರುತಿಸಿಕೊಳ್ಳಬೇಕು ಎಂದು ನಾವು ಬಯಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲು ನಾನು ಬದ್ಧ. ನಿಮ್ಮ ಸರ್ಕಾರ ನಿಮ್ಮ ಜತೆ ಇರಲಿದೆ. ಇದನ್ನು ಉಳಿಸಿ ಬೆಳೆಸಿ ಎಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಶುಭಹಾರೈಸಿದರು.

ಈ ಸಂದರ್ಭ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಆಳ್ವ, ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ಮಿಥುನ್ ರೈ, ಪದ್ಮರಾಜ್, ನಿತಿನ್ ಶೆಟ್ಟಿ, ರಾಹುಲ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.