ಸ್ವಯಂ ಪ್ರೇರಣೆಯಿಂದ ಎಪಿಕ್ ಕಾರ್ಡಿಗೆ ಆಧಾರ್ ಜೋಡಣೆ ಮಾಡಿಸುವಂತೆ ಜಿಲ್ಲಾಧಿಕಾರಿ ಕರೆ

ಉಡುಪಿ: ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಎಪಿಕ್ ಕಾರ್ಡಿಗೆ ಸ್ವಯಂ ಪ್ರೇರಿತರಾಗಿ ಜೋಡಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕರೆ ನೀಡಿದರು.

ಅವರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಮತದಾರರ ಎಪಿಕ್ ಕಾರ್ಡಿಗೆ ಸ್ವಯಂ ಪ್ರೇರಿತರಾಗಿ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸಲಿದ್ದು, ಚುನಾವಣೆಯನ್ನು ಪಾರದರ್ಶಕ, ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು ಮತದಾರರ ಪಟ್ಟಿ ತಳಹದಿಯಾಗಿದೆ. ಅರ್ಹ ಮತದಾರರ ನೋಂದಣಿಯಾಗಿ ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಭಾರತ ಚುನಾವಣಾ ಆಯೋಗ ಕೆಲವೊಂದು ತಿದ್ದುಪಡಿಯನ್ನು ತರುವುದರೊಂದಿಗೆ ಮತದಾರರ ಎಪಿಕ್ ಅನ್ನು ಆಧಾರ್‌ಗೆ ಜೋಡಣೆ ಮಾಡಲು ತಿಳಿಸಿದೆ ಎಂದರು.

ಸ್ವಯಂ ಪ್ರೇರಿತವಾಗಿ ಆಧಾರ್ ಜೋಡಣೆ ಮಾಡುವುದು ಸರಳ ಪ್ರಕ್ರಿಯೆಯಾಗಿದ್ದು, ಈ ಸಂದರ್ಭದಲ್ಲಿ ಗೋಪ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಪ್ರತಿಯೊಬ್ಬ ಮತದಾರರು ಆಧಾರ್ ಜೋಡಣೆಯನ್ನು ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಹೊಸದಾಗಿ ಮತದಾರರ ಪಟ್ಟಿಗೆ ದಾಖಲಾಗುವ ಯುವ ಮತದಾರರಿಗೆ ಸುಲಭವಾಗುವಂತೆ ಅರ್ಹತಾ ದಿನಾಂಕವನ್ನು ಸರಣೀಕೃತಗೊಳಿಸುವುದರೊಂದಿಗೆ ವರ್ಷದಲ್ಲಿ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ 1 ರಂದು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಿದ್ದು, ಯುವ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಸ್ವಾಗತಿಸಿದರು, ಅಶೋಕ್ ಕಾಮತ್ ನಿರೂಪಿಸಿ, ವಂದಿಸಿದರು.
ಸೇವಾದಳದ ಆರೂರು ತಿಮ್ಮಪ್ಪ ಶೆಟ್ಟಿ ಹಾಗೂ ಫಕೀರಪ್ಪ ಗೌಡ ಧ್ವಜ ನೀತಿ ಸಂಹಿತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.