ಉಡುಪಿ ಕೃಷ್ಣಮಠದ ದರ್ಶನ ಸದ್ಯಕ್ಕಿಲ್ಲ: ಅದಮಾರು ಈಶಪ್ರಿಯ ಸ್ವಾಮೀಜಿ

ಉಡುಪಿ: ಸದ್ಯ ಕೃಷ್ಣಮಠದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿಲ್ಲ. ಮುಂದಿನ ಪರಿಸ್ಥಿತಿ ನೋಡಿಕೊಂಡು ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.
ಕೃಷ್ಣಮಠದ ಪರಂಪರೆ ಉಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಕ್ತರು ಮನೆಯಲ್ಲಿದ್ದುಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಮಠದಲ್ಲಿಯೂ ದೇಶದ ಒಳಿತಿಗೆ ಪೂಜೆ, ಪ್ರಾರ್ಥನೆಗಳು ನಡೆಯಲಿವೆ ಎಂದು ಶ್ರೀಗಳು ಹೇಳಿದರು.
ಮನಸ್ಸಿನ ದೋಷಗಳು ರೋಗಕ್ಕೆ ಮೂಲ ಕಾರಣ. ಆಯುರ್ವೇದದ ಪ್ರಕಾರ ಮನಸ್ಸು ಚೆನ್ನಾಗಿದ್ದರೆ ಎಂತಹ ರೋಗಗಳನ್ನೂ ಗೆಲ್ಲಬಹುದು. ಹಾಗಾಗಿ, ಮನಸ್ಸನ್ನು ಗಟ್ಟಿಯಾಗಿಟ್ಟುಕೊಂಡು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಂಡು ರೋಗ ನಿವಾರಕ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳೋಣ ಎಂದು ಸ್ವಾಮೀಜಿ ಸಲಹೆ ನೀಡಿದರು.