ಕುಂದಾಪುರ: ಬನ್ಸ್ ರಾಘು ಹತ್ಯೆ ಪ್ರಕರಣ; ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಕುಂದಾಪುರ: ಇಲ್ಲಿನ ಖಾರ್ವಿಕೇರಿ ನಿವಾಸಿ 42 ವರ್ಷದ ರಾಘವೇಂದ್ರ ಶೇರುಗಾರ್ (ಬನ್ಸ್ ರಾಘು) ಕೊಲೆ ಪ್ರರಕಣದ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಶಿವಮೊಗ್ಗ ನಿವಾಸಿಗಳಾದ ಶಫಿವುಲ್ಲಾ ಅಲಿಯಾಸ್ ಆಟೋ ಶಫಿ (40), ಮಹಮ್ಮದ್ ಇಮ್ರಾನ್ (43) ಎಂಬ ಆರೋಪಿಗಳನ್ನು ಅಕ್ಟೋಬರ್ 5 ರಂದು ಕುಂದಾಪುರ ಪೊಲೀಸರು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದು ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಹೆಚ್ಚಿನ ತನಿಖೆಗಾಗಿ ಮೂರು ದಿನಗಳ ಕಾಲ ಪೊಲೀಸ್‌ ಬಂಧನಕ್ಕೆ ಪಡೆದಿದ್ದು, ಸೋಮವಾರ ಬಂಧನದ ಅವಧಿ ಮುಗಿದ ಹಿನ್ನೆಲೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಕರಣ:
ರಾಘವೇಂದ್ರ ಶೇರುಗಾರ್ ಚಿಕನ್ ಸಾಲ್ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಓವರ್ ಟೇಕ್ ಮಾಡುವ ಭರದಲ್ಲಿ ಆರೋಪಿಗಳ ಕಾರಿಗೆ ತಾಗಿತ್ತು. ಇದೇ ವಿಚಾರದಲ್ಲಿ ಗಲಾಟೆ ನಡೆದು ಆರೋಪಿತ ಶಫಿವುಲ್ಲಾ ತನ್ನ ಕಾರಿನೊಳಗಿದ್ದ ಚಾಕುವಿನಿಂದ ರಾಘವೇಂದ್ರ ಶೇರುಗಾರ್‌ ಅವರಿಗೆ ಇರಿದು ಪರಾರಿಯಾಗಿದ್ದ. ವಿಪರೀತ ರಕ್ತಸ್ರಾವದಿಂದ ರಾಘವೇಂದ್ರ ಶೇರುಗಾರ್‌ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಕೃತ್ಯಕ್ಕೆ ಯಾವುದೇ ವೈಷಮ್ಯ, ಪೂರ್ವದ್ವೇಷ, ವ್ಯವಹಾರ ಮತ್ತು ಯಾವುದೇ ಸಂಘರ್ಷ ಇಲ್ಲದಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿ ಶಫಿವುಲ್ಲಾಗೆ ಜುಗಾರಿ ಆಡುವ ಚಟವಿದ್ದು ಆತನ ಸ್ನೇಹಿತ ಇಮ್ರಾನ್‌ ಜೊತೆ ಸೇರಿ ವಿವಿಧೆಡೆ ಜುಗಾರಿ ಆಡುತ್ತಿದ್ದ. ಅಕ್ಟೋಬರ್ 1 ರಂದು ಕುಂದಾಪುರದಿಂದ ಮರಳಿ ಶಿವಮೊಗ್ಗಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದೆ.

ಉಡುಪಿ ಎಸ್ಪಿ ಡಾ. ಅರುಣ್ ಕೆ., ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ಧಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಕೆ.ಯು. ಮಾರ್ಗದರ್ಶನದಲ್ಲಿ ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಪೊಲೀಸರ ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಸಿಸಿ ಟಿವಿ ದೃಶ್ಯಾವಳಿ ಸಹಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ಕಲೆಹಾಕಿ ಆರೋಪಿಗಳ ಪತ್ತೆಗೆ ಶಿವಮೊಗ್ಗ, ಬೆಂಗಳೂರು ಸಹಿತ ವಿವಿಧ ಕಡೆಗಳಿಗೆ ತೆರಳಿದ್ದರು. ಕುಂದಾಪುರ ಪೊಲೀಸ್ ನಿರೀಕಕ ನಂದಕುಮಾರ್‌ ನೇತೃತ್ವದಲ್ಲಿ ಕುಂದಾಪುರ ಠಾಣೆಯ ಪಿಎಸ್‌ಐ ವಿನಯ ಕೊರ್ಲಹಳ್ಳಿ, ಅಪರಾಧ ವಿಭಾಗದ ಪಿಎಸ್‌ಐ ಪ್ರಸಾದ್‌ ಕುಮಾರ್‌, ಶಂಕರನಾರಾಯಣ ಠಾಣೆಯ ಪಿಎಸ್‌ಐ ಮಧು ಬಿ.ಇ ಹಾಗೂ ಸಿಬ್ಬಂದಿಗಳಾದ ಮಧು ಸೂದನ್‌, ರಾಮ, ಶ್ರೀಧರ್, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ ಆರೋಪಿಗಳನ್ನು ಬಂಧಿಸಿದ್ದರು.