ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗುಹೆಯಲ್ಲಿ ವಾಸವಾಗಿದ್ದ ಪ್ರಕರಣದಲ್ಲಿ, ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ರಷ್ಯಾಕ್ಕೆ ಹಿಂತಿರುಗಲು ಅಗತ್ಯವಾದ ಪ್ರಯಾಣ ದಾಖಲೆಗಳನ್ನು ಒದಗಿಸಲು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ.ಈ ಸಂಬಂಧ ಮಕ್ಕಳ ತಂದೆ ಡ್ರೋರ್ ಶ್ಲೋಮೊ ಗೋಲ್ಡ್ಸ್ಟೈನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
“ಗುಹೆಯಲ್ಲಿ ತಂಗಿದ್ದ ಮಹಿಳೆ ಮತ್ತು ಮಕ್ಕಳು ಪರವಾನಗಿ ಪಡೆದು ರಷ್ಯಾದಿಂದ ಭಾರತಕ್ಕೆ ಬಂದಿದ್ದರೂ, ಅವಧಿ ಮೀರಿ ನೆಲೆಸಿದ್ದಾರೆ. ಹೀಗಾಗಿ, ರಷ್ಯಾ ಸರ್ಕಾರಕ್ಕೆ ಅಗತ್ಯವಾದ ಎಲ್ಲಾ ವಿವರಗಳನ್ನು ಒದಗಿಸಬೇಕು. ತಾಯಿ ಸ್ವತಃ ಮಕ್ಕಳೊಂದಿಗೆ ರಷ್ಯಾಕ್ಕೆ ಹಿಂತಿರುಗಲು ವಿನಂತಿಸಿದ್ದಾರೆ. ರಷ್ಯಾ ಸರ್ಕಾರವೂ ತಾಯಿ ಮತ್ತು ಮಕ್ಕಳನ್ನು ತನ್ನ ದೇಶಕ್ಕೆ ಕರೆತರಲು ಸೂಚಿಸಿದೆ. ಆದ್ದರಿಂದ, ಸಾಧ್ಯವಾದಷ್ಟು ಬೇಗ ಮೂವರನ್ನೂ ವಾಪಸು ಕಳಿಸಬೇಕು. ಅದಕ್ಕೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು” ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.


















