ಅಕ್ರಮ ಆಸ್ತಿ ಗಳಿಸಿದ ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ ಸರಕಾರಿ ಅಧಿಕಾರಿಗೆ ಜಿಲ್ಲಾ ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಸರಕಾರಿ ಅಧಿಕಾರಿಯಾದ ಆರೋಪಿ ಅಬ್ದುಲ್ ಅಜೀಜ್ ಅವರು ಕುಂದಾಪುರ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ಬಗ್ಗೆ ಅಂದಿನ ಪಿ.ಐ ಕೆ.ಯು. ಬೆಳ್ಳಿಯಪ್ಪ ಇವರು ಮಾಹಿತಿಯನ್ನು ಸಂಗ್ರಹಿಸಿ, ಪಿರ್ಯಾದು ನೀಡಿದ ಮೇರೆಗೆ ಅಂದಿನ ಮಂಗಳೂರು ಪೊಲೀಸ್ ವಿಭಾಗದ ಎಸ್.ಪಿ. ಧರ್ಮರಾಜ್ ಎ.ಜಿ. ರವರು ಪ್ರಕರಣ ದಾಖಲಿಸಿ, ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆಪಾದಿತರ ಮನೆ ಶೋಧ ನಡೆಸಲು ಸರ್ಚ್ ವಾರೆಂಟ್ ಪಡೆದು ಎಸ್.ಪಿ. ಹಾಗೂ ಉಡುಪಿಯ ಪ್ರಭಾರ ಡಿ,ವೈ.ಎಸ್.ಪಿ. ರವರು ಆಪಾದಿತ ಸರಕಾರಿ ಅಧಿಕಾರಿಯವರ ಮನೆ ಹಾಗೂ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ನಡೆಸಿರುತ್ತಾರೆ.

ಪ್ರಕರಣದ ಮುಂದಿನ ತನಿಖೆ ಕೈಗೊಂಡ ಲೋಕಾಯುಕ್ತ ಡಿ.ವೈಎಸ್.ಪಿ. ಪ್ರಭುದೇವ ಬಿ. ಮಾನೆ, ಆಪಾದಿತ ಸರಕಾರಿ ಅಧಿಕಾರಿಯು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ ಆಸ್ತಿಯ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ, ತನಿಖೆಯನ್ನು ಕ್ಲಪ್ತ ಸಮಯದಲ್ಲಿ ಪೂರ್ತಿಗೊಳಿಸಿ, ಅಂತಿಮ ವರದಿಯನ್ನು ಆಪಾದಿತರ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುತ್ತಾರೆ.

ಲೋಕಾಯುಕ್ತ ಡಿ.ವೈಎಸ್.ಪಿ ಸದಾನಂದ ವರ್ಣೇಕರ್ ಇವರು ಆಪಾದಿತ ಸರಕಾರಿ ಅಧಿಕಾರಿಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಶಾಂತವೀರ ಶಿವಪ್ಪ ಅವರು ಆರೋಪಿ ಅಬ್ದುಲ್ ಅಜೀಜ್‌ಗೆ ಕಲಂ. 13(1)(ಇ), 13(2) ಪಿ.ಸಿ. ಕಾಯಿದೆ 1988 ರಲ್ಲಿ 1 ವರ್ಷಗಳ ಸಾದಾ ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಪ್ರಸ್ತುತ ಅಬ್ದುಲ್ ಅಜೀಜ್ ಇವರು ನಿವೃತ್ತಿಯಾಗಿರುತ್ತಾರೆ. ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಟಿ. ವಿಜಯ ಕುಮಾರ್ ಶೆಟ್ಟಿ ವಾದ ಮಂಡಿಸಿರುತ್ತಾರೆ.