ಕೊರೋನಾ ವೈರಸ್‌ನಿಂದ ಸಂಕಷ್ಟಗೊಂಡವರಿಗೆ 500 ಕೋಟಿ: ಟಾಟಾ ಟ್ರಸ್ಟ್

ಮುಂಬೈ: ದೇಶದಲ್ಲಿ ಹರಡುತ್ತಿರುವ  ಕೊರೋನಾ ವೈರಸ್ ತಡೆಗೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ 500 ಕೋಟಿ ರೂ. ನೀಡುವುದಾಗಿ ಟಾಟಾ ಟ್ರಸ್ಟ್‌ ಘೋಷಿಸಿದೆ.
ಭಾರತದಲ್ಲಿ ಕೊರೊನಾ ಹೊಡೆತದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ತತ್‌ಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವುದು ಅಗತ್ಯವಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗುವುದು ಅನಿವಾರ್ಯವಾಗಿದೆ ಎಂದು ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್‌ ಟಾಟಾ ಪ್ರತಿಪಾದಿಸಿದ್ದಾರೆ.
ಕೊರೋನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಯ ಸುರಕ್ಷತೆಗಾಗಿ ಅಗತ್ಯವಿರುವ ಪರಿಕರಗಳು, ಕೊರೋನಾ ಪೀಡಿತರಿಗೆ ಗುಣಪಡಿಸಲು ಬೇಕಾಗಿರುವ ವ್ಯವಸ್ಥೆಗಳು, ತಲಾ ಪರೀಕ್ಷೆಯನ್ನು ಹೆಚ್ಚಿಸುವ ಸಲುವಾಗಿ ಪರೀಕ್ಷಾ ಕಿಟ್‌ಗಳ ಖರೀದಿಗಾಗಿ ಈ ಹಣ ಮೀಸಲಿಡುವುದಾಗಿ ಹೇಳಿದೆ.
ಕೊರೊನಾ ಸೋಂಕಿತರ ಚಿಕಿತ್ಸಾ ಸೌಕರ್ಯಗಳು, ಆರೋಗ್ಯ ಸಿಬ್ಬಂದಿ ಹಾಗೂ ಸಾಮಾನ್ಯ ಜನರ ಸುರಕ್ಷತಾ ತರಬೇತಿಗಾಗಿಯೂ ಈ ಹಣವನ್ನು ಉಪಯೋಗಿಸಬಹುದು ಎಂದು ಟಾಟಾ ಟ್ರಸ್ಟ್‌ ತಿಳಿಸಿದೆ.