ಕೊರೋನಾ ಭೀತಿ: ನಾಳೆಯಿಂದ ಸೆಲೂನ್‌ ಬಂದ್

ಕುಂದಾಪುರ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸೆಲೂನ್ ಶಾಪ್ ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಗಂಗೊಳ್ಳಿ ವಲಯ ಸವಿತಾ ಸಮಾಜ ತೀರ್ಮಾನಿಸಿದೆ.
ಗಂಗೊಳ್ಳಿ, ಗುಜ್ಜಾಡಿ, ತ್ರಾಸಿ, ಮುಳ್ಳಿಕಟ್ಟೆ, ಬಂಟ್ವಾಡಿ, ಅಲೂರು ಹಾಗೂ ಹೆಮ್ಮಾಡಿಯಲ್ಲಿರುವ ಎಲ್ಲ ಸೆಲೂನ್ ಅಂಗಡಿಗಳನ್ನು ಮೇ 26 ರಿಂದ ಮುಂದಿನ 10 ದಿನಗಳವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ನಿರ್ಧಾರಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಹೊರ ರಾಜ್ಯ, ವಿದೇಶದಿಂದ ಬಂದವರು ಕೂಡ ತಮ್ಮ ಅಂಗಡಿಗಳಿಗೆ ಬರುವುದರಿಂದ ತಮ್ಮ‌ ಸಂಘದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದಾಗಿ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.