ಕುಂದಾಪುರ: ಇವರು ಕೊರೋನಾ ಗೆದ್ದು ಬಂದವರು!

ಕುಂದಾಪುರ: ಕುಂದಾಪುರ ಸರ್ಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಭಾನುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾರ್ಬಟ್ ರೆಬೆಲ್ಲೊ, ಪಿಜಿಶಿಯನ್ ಡಾ. ನಾಗೇಶ್, ಬೈಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಕುಂದಾಪುರ ಪಿಎಸ್ಐ ಹರೀಶ್ ಆರ್. ಮೊದಲಾದವರು ಕೋವಿಡ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆದು ಕೊರೋನ ಮುಕ್ತರಾದವರಿಗೆ ಗುಲಾಬಿ ಗಿಡಗಳನ್ನು ವಿತರಿಸಿ, ಮಕ್ಕಳಿಗೆ ಚಾಕಲೇಟ್ ನೀಡುವ ಮೂಲಕ ವಿಶೇಷ ರೀತಿಯಲ್ಲಿ ಬೀಳ್ಕೊಟ್ಟರು.
ಈ ಸಂದರ್ಭ ಕುಂದಾಪುರ ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಸ್ತುತ ಈ ಆಸ್ಪತ್ರೆಯಲ್ಲಿ ಒಟ್ಟು 78 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಏಳನೆ ದಿನಕ್ಕೆ 3 ವರ್ಷ, 8 ವರ್ಷ ಮತ್ತು 14ವರ್ಷದ ಮಕ್ಕಳು ಸಹಿತ 55 ವರ್ಷದ ವ್ರದ್ಧರವರೆಗೆ ಒಟ್ಟು 14 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಬಿಡುಗಡೆಗೊಂಡ ಬಹುತೇಕ ಮಂದಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರು, ಒಂದಷ್ಟು ಮಂದಿ ತೆಲಂಗಾಣದಿಂದ ಬಂದವರಾಗಿದ್ದು ಸೋಂಕಿನ ಯಾವುದೇ ಲಕ್ಷ್ಮಣಗಳಿಲ್ಲದವರಾಗಿದ್ದಾರೆ.