ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಲಾಡ್ಜಿಗೆ ಬರುತ್ತೇನೆಂದು ಹೇಳಿದ್ದ ನಾಲ್ಕನೇ ವ್ಯಕ್ತಿಯ ಸುತ್ತ ಅನುಮಾನದ ಹುತ್ತ.!

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಮತ್ತೋರ್ವ ವ್ಯಕ್ತಿ ಎಂಟ್ರಿಯಾಗಿದ್ದಾನೆ‌. ಆ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಸಂತೋಷ್ ಪಾಟೀಲ್ ಉಡುಪಿಗೆ ಬಂದು, ರೂಂ ಪಡೆಯುವ ವೇಳೆ ರಾಜೇಶ್ ಎಂಬಾತನ ಹೆಸರು ಉಲ್ಲೇಖಿಸಿದ್ದನು ಎನ್ನಲಾಗಿದೆ. ಹೀಗಾಗಿ

ಉಡುಪಿಯ ಲಾಡ್ಜಿಗೆ ಬರುತ್ತೇನೆಂದು ಹೇಳಿದ್ದ ರಾಜೇಶ್ ಯಾರು ಪ್ರಶ್ನೆ ಕಾಡುತ್ತಿದ್ದು, ಆತನ ಸುತ್ತ ಅನುಮಾನದ ಹುತ್ತ ನೆಟ್ಟಿದೆ.

ಚಿಕ್ಕಮಗಳೂರಿನ ಹೋಂ ಸ್ಟೇನಲ್ಲಿ ಒಂದೇ ಕೋಣೆಯಲ್ಲಿ ಮೂವರು ಸ್ನೇಹಿತರು ಉಳಿದಿದ್ದರು.‌ಆದರೆ ಉಡುಪಿ ಲಾಡ್ಜಿನಲ್ಲಿ ಎರಡು ಪ್ರತ್ಯೇಕ ಕೋಣೆ ಪಡೆದಿದ್ದರು. ಪ್ರತ್ಯೇಕ ಕೋಣೆ ಯಾಕೆ ಎಂದು ಕೇಳಿದ್ದಕ್ಕೆ, ಸ್ನೇಹಿತ ಬರುತ್ತಾನೆಂದು ಸಂತೋಷ್ ತಿಳಿಸಿದ್ದನು. ಸ್ನೇಹಿತ ರಾಜೇಶ್ ಯಾರು?. ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಫುಟೇಜ್ ಪರಿಶೀಲಿಸುತ್ತಿದ್ದಾರೆ‌. ಪ್ರತ್ಯೇಕ ಕೋಣೆ ಪಡೆಯುವ ಉದ್ದೇಶದಿಂದ ರಾಜೇಶ್ ಹೆಸರು ಹೇಳಿದ್ದನೇ?. ನಿಜವಾಗಿಯೂ ರಾಜೇಶ್ ಅನ್ನುವ ವ್ಯಕ್ತಿ ಭೇಟಿಗೆ ಬರಬೇಕಾಗಿತ್ತಾ?. ರಾಜೇಶ್ ಲಾಡ್ಜಿಗೆ ಬಂದು ಹೋಗಿದ್ದನಾ?. ಈ ಎಲ್ಲಾ ವಿಚಾರಗಳ ಬಗ್ಗೆಯೂ ತನಿಖಾಧಿಕಾರಿಗಳು ನಿಗಾ ವಹಿಸಿದ್ದು, ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.