ಕರಾವಳಿಯಲ್ಲಿ ಮುಂದುವರಿದ ಮಳೆ: ಜನಜೀವನ ಅಸ್ತವ್ಯಸ್ತ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದ್ದು, ಗುಂಡಿಬೈಲು, ಬೈಲಕೆರೆ ಮೊದಲಾದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ.

ಕಾರ್ಕಳ ಹಾಗೂ ಕುಂದಾಪುರ ತಾಲ್ಲೂಕಿನಾದ್ಯಂತ ಭಾರೀ ವರ್ಷಾಧರೆಯಾಗಿದ್ದು, ಇದರಿಂದ ಜನಜೀವನಕ್ಕೆ ತೊಂದರೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಆರಂಭಗೊಂಡ ಮಳೆ ಶನಿವಾರ ಬೆಳಿಗ್ಗೆ ಸ್ವಲ್ಪ ಬಿಡುವು ನೀಡಿದೆ.

ನಗರದ ಜಪ್ಪಿನ ಮೊಗರು ಮತ್ತಿತರ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.
ಬಂಟ್ವಾಳ, ಬೆಳ್ತಂಗಡಿ ಪ್ರದೇಶದಲ್ಲೂ ಶುಕ್ರವಾರ ರಾತ್ರಿ ಮಳೆಯಾಗಿದ್ದು, ಬಂಟ್ವಾಳ ಪೇಟೆ ಹಾಗೂ ಬಿಸಿ ರೋಡ್ ಮಧ್ಯೆ ನೀರು ನಿಂತಿತ್ತು. ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.