ರಾಜ್​ ಕುಟುಂಬದಿಂದ ‘ಪರಮಾತ್ಮ’ನ ಸ್ಮಾರಕ ನಿರ್ಮಾಣ : ಅಪ್ಪು ನಮ್ಮನ್ನಗಲಿ 2 ವರ್ಷ

ಕನ್ನಡ ಚಿತ್ರರಂಗದ ದೊಡ್ಮನೆಯ ರಾಜಕುಮಾರ, ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ ನಾಳೆಗೆ (ಅ.29) ಎರಡು ವರ್ಷ.
ನಾಳೆ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ 2ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆ ಕಂಠೀರ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕ ಸಿಂಗಾರಗೊಳ್ಳುತ್ತಿದೆ.

ಕಂಠೀರವ ಸ್ಟುಡಿಯೋದಲ್ಲಿ ದೊಡ್ಮನೆ ಕುಟುಂಬ ಡಾ.ರಾಜ್​ಕುಮಾರ್​, ಪಾರ್ವತಮ್ಮ ರಾಜ್​ಕುಮಾರ್​ ಸ್ಮಾರಕದ ಬಳಿಯೇ ಪುನೀತ್​ ರಾಜ್​ಕುಮಾರ್​ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಬಿಳಿ ಮಾರ್ಬಲ್ಸ್​ನಲ್ಲಿ ಅಪ್ಪು ಸಮಾಧಿಯನ್ನು ಕಟ್ಟಲಾಗಿದ್ದು, ಅದರ ಮೇಲೆ ‘ರಾಜಕುಮಾರ’ನ ಫೋಟೋ ಕೂಡ ಇದೆ. ಸ್ಮಾರಕದ ಸುತ್ತಲೂ ಬಿಳಿ ಬಣ್ಣದ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಅಣ್ಣಾವ್ರ ಸ್ಮಾರಕದ ಶೈಲಿಯಲ್ಲಿ ಪುನೀತ್​ ರಾಜ್​ಕುಮಾರ್​ ಸ್ಮಾರಕವೂ ನಿರ್ಮಾಣ ಆಗಿರುವುದು ವಿಶೇಷ.

ಇಂದಿಗೂ ನಗುಮುಖದ ಒಡೆಯ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ಕಳೆದೆರೆಡು ವಸಂತಗಳಿಂದ ಒಂದಲ್ಲ ಒಂದು ವಿಚಾರವಾಗಿ ಅಪ್ಪುವಿನ ನೆನಪು ಮರುಕಳಿಸುತ್ತಿದೆ. ಇವತ್ತಿಗೂ ‘ಪರಮಾತ್ಮ’ ನಮ್ಮ ಜೊತೆಯಲ್ಲಿಯೇ ಇದ್ದಾರೆ ಅನ್ನೋ ಭಾವನೆ ಅವರ ಕುಟುಂಬಸ್ಥರಲ್ಲಿ ಹಾಗೂ ಅಭಿಮಾನಿಗಳಲ್ಲಿದೆ. ನಾಳಿನ ಅವರ 2ನೇ ವರ್ಷದ ಪುಣ್ಯಸ್ಮರಣೆಗಾಗಿ ಕಂಠೀರ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕ ಸಿಂಗಾರಗೊಳ್ಳುತ್ತಿದೆ.

‘ಗಂಧದ ಗುಡಿ’ಗೆ ಒಂದು ವರ್ಷ: ಅಭಿಮಾನಿಗಳ ಆರಾಧ್ಯ ದೈವವಾಗಿರುವ ಅಪ್ಪುವಿನ ಪುಣ್ಯಸ್ಮರಣೆ ನಿಮಿತ್ತ ನಾಳೆ ಇಡೀ ದಿನ ಅನ್ನ ಸಂತರ್ಪಣೆಗೆ ಅಪ್ಪು ಹುಡುಗರ ಸಂಘ ಸಜ್ಜಾಗಿದೆ. ಜೊತೆಗೆ ರಕ್ತದಾನ ಹಾಗೂ ನೇತ್ರ ತಪಾಸಣೆಯೂ ಇರಲಿದೆ. ಇದರ ಜೊತೆಗೆ ಸ್ಮಾರಕಕ್ಕೆ ಲೈಟಿಂಗ್ ಅರೇಂಜ್​ಮೆಂಟ್ಸ್​ ಮಾಡಲಾಗುತ್ತಿದೆ. ಈ ಮಧ್ಯೆ ಪುನೀತ್​ ನಟನೆಯ ‘ಗಂಧದ ಗುಡಿ’ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆ ಅವರ ಪತ್ನಿ, ನಿರ್ಮಾಪಕಿ ಅಶ್ವಿನಿ ಅವರು ಗಂಧದ ಗುಡಿ ಚಿತ್ರದ ಸಮಯದಲ್ಲಿ ಅಪ್ಪು ಹೇಗಿದ್ದರು ಅನ್ನೋ ವಿಡಿಯೋವೊಂದನ್ನು ಅನಾವರಣ ಮಾಡಿದ್ದಾರೆ

ವರನಟ ಡಾ.ರಾಜ್​ಕುಮಾರ್ ಹಾಗೂ ಪಾರ್ವತಮ್ಮ ರಾಜ್​ಕುಮಾರ್ ಅವರ ಕಿರಿಯ ಪುತ್ರನಾಗಿ 1975ರಲ್ಲಿ ಜನಿಸಿದ ಪುನೀತ್ (ಲೋಹಿತ್) ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಅಪ್ಪು ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿ ಬಳಿಕ ಸ್ಯಾಂಡಲ್​ವುಡ್​ನ ಸ್ಟಾರ್​ ನಟನಾಗಿ ಬೆಳೆದರು. ಬಾಲನಟನಿಂದ ನಾಯಕನಾಗಿ ಜನಮನ ಗೆದ್ದರು. 46ನೇ ವಯಸ್ಸಿನೊಳಗೆ ಅದೆಷ್ಟೋ ಸಾಧನೆ ಮಾಡಿದ್ದರು. ಆದರೆ, ಅಷ್ಟರಲ್ಲೇ ವಿಧಿ ಬೇರೆಯದೆ ಆಟ ಆಡಿತ್ತು. 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು.

ಬಳಿಕ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೊಡ್ಮನೆ ಕುಟುಂಬದ ಬಂಧುಗಳು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ನಾಳೆ ಪುನೀತ್​ ರಾಜ್​ಕುಮಾರ್​ ಪುಣ್ಯಸ್ಮರಣೆ ಹಿನ್ನೆಲೆ ಸ್ಮಾರಕಕ್ಕೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆಯಿದೆ.