ಉಡುಪಿಗೂ ಕಾಲಿಟ್ಟಿತು ಕೆಂಗಣ್ಣು ರೋಗ: ದ.ಕದಲ್ಲಿ ಸೋಂಕಿತರ ಪ್ರಮಾಣ ಇಳಿಕೆ

ಉಡುಪಿ: ದ.ಕನ್ನಡದಾದ್ಯಂತ ಜನಸಾಮಾನ್ಯರನ್ನು ಕಾಡಿದ ಕೆಂಗಣ್ಣು ರೋಗ ಇದೀಗ ಉಡುಪಿಗೂ ಕಾಲಿಟ್ಟಿದ್ದು, ರೋಗಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳಲ್ಲಿ ಕೆಂಗಣ್ಣು ರೋಗಕ್ಕೆ ಹಲವರು ತುತ್ತಾಗಿದ್ದಾರೆ. ಈ ಮಧ್ಯೆ, ದ.ಕನ್ನಡದಲ್ಲಿ ರೋಗ ಬಾಧೆ ಇಳಿಕೆಯಾಗಿದ್ದು ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ.

ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಂಗಣ್ಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೆಂಗಣ್ಣು ರೋಗವು ಒಂದು ವೈರಾಣು ಬಾಧಿತ ರೋಗವಾಗಿದ್ದು, ವಾರದೊಳಗೆ ಗುಣಮುಖವಾಗುತ್ತದೆ. ಕೆಂಗಣ್ಣು ರೋಗದಿಂದ ಬಾಧಿತರಾಗಿರುವವರು ವೈದ್ಯರ ಸಲಹೆಯಂತೆ ಕಣ್ಣಿನ ಹನಿಗಳನ್ನು ಹಾಕಬೇಕು ಮತ್ತು ಹೊರಗೆ ಅಡ್ಡಾಡುವಾಗ ಕನ್ನಡಕಗಳನ್ನು ಧರಿಸಬೇಕು. ಕೈಗಳ ಶುಚಿತ್ವವನ್ನು ಕಾಪಾಡುವುದು ಬಹುಮುಖ್ಯವಾಗಿದೆ.