ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವಹೇಳನ: ಅರ್ನಾಬ್ ಗೋಸ್ವಾಮಿ ಬಂಧನಕ್ಕೆ ಒತ್ತಾಯ

ಉಡುಪಿ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಾಧುಗಳ ಗುಂಪು ಹತ್ಯೆಯ ಕುರಿತಾಗಿ ರಿಪಬ್ಲಿಕ್ ಟಿವಿಯ ನಿರೂಪಕ ಅರ್ನಾಬ್ ಗೋಸ್ವಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವಹೇಳನ ಮಾಡಿರುವುದು ಭಾರತೀಯ ಪತ್ರಿಕೋದ್ಯಮಕ್ಕೇ ಕಳಂಕ. ಈ ಕುರಿತು ಮಹಾರಾಷ್ಟ್ರ ಸರಕಾರ ಸೂಕ್ತ ಕ್ರಮ‌ಕೈಗೊಂಡು 101 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದರೂ, ದ್ವೇಷದ ಭಾವನೆಗಳನ್ನು ಜಾತ್ಯಾತೀತ ಭಾರತದ ಪ್ರಜೆಗಳಲ್ಲಿ ಬಿತ್ತುತ್ತಿರುವ ಅರ್ನಾಬ್ ಗೋಸ್ವಾಮಿಯನ್ನು ಭಾರತದ ಪತ್ರಿಕಾ ಮಾಧ್ಯಮ ಲೋಕ ತಕ್ಷಣ ದೂರವಿಟ್ಟು ಮಾಧ್ಯಮ ಕ್ಷೇತ್ರದ ಮರ್ಯಾದೆ ಉಳಿಸಬೇಕು ಮತ್ತು ಸರಕಾರ ಸೂಕ್ತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಒತ್ತಾಯಿಸಿದ್ದಾರೆ.
ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷೆಯಾಗಿ ಮಾಡಿದ ಆಹಾರ ಭದ್ರತಾ ಕಾಯ್ದೆ ವಿಶ್ವ ಮಾನ್ಯತೆ ಪಡೆದಿದ್ದು, ಲಾಕ್‌ಡೌನ್ ಸಮಯದಲ್ಲಿ ಅದರ ಮಹತ್ವ ಜನಸಾಮಾನ್ಯರಿಗೆ ಅರಿವಿಗೆ ಬಂದಿದೆ.
ಈ ಹಿಂದೆ ನಡೆದ ಗುಂಪು ಹತ್ಯೆಗಳ ವಿಷಯದಲ್ಲಿ ಆಡಳಿತ ಬಿಜೆಪಿ ಕಠಿಣ ಕ್ರಮ ಕೈಗೊಂಡು  ಆರೋಪಿಗಳಿಗೆ ನಿರ್ಭಯ ಪ್ರಕರಣದ ಅಪರಾಧಿಗಳಿಗೆ ನೀಡಿದಂತೆ ಕಠಿಣ ಶಿಕ್ಷೆ ನೀಡಿದ್ದಲ್ಲಿ ಇಂದು ಮಾಬ್ ಲಿಂಚಿಂಗ್‌ನಂತಹ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ ಎಂದು ಹರೀಶ್ ಕಿಣಿ ಅಭಿಪ್ರಾಯಪಟ್ಟಿದ್ದಾರೆ.