ಲೋಕಾಯುಕ್ತದ ಹಲ್ಲು ಕಿತ್ತದ್ದು ಕಾಂಗ್ರೆಸ್: ಸಚಿವ ಕೋಟ ಟೀಕೆ

ಹಿಂದಿನ ಸಿದ್ದರಾಮಯ್ಯ ಸರಕಾರ ಎಸಿಬಿ ರಚನೆ ಮಾಡುವ ಮೂಲಕ ಲೋಕಾಯುಕ್ತವನ್ನು ಸಂಪೂರ್ಣ ನಿಷ್ಕ್ರಿಯ ಮಾಡಿತ್ತು. ಆದರೆ ಬಿಜೆಪಿ ಸರಕಾರವು ಲೋಕಾಯುಕ್ತಕ್ಕೆ ಜೀವ ಕೊಟ್ಟು ಶಕ್ತಿ ತುಂಬಿದೆ ಎಂದು ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕ ಮಾಡಾಳ್ ಭ್ರಷ್ಟಾಚಾರ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಮಣಿಪಾಲದಲ್ಲಿಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಥವರ ಮೇಲೆ ದಾಳಿ ಮಾಡಿ ಇಂಥವರನ್ನು ಹಿಡಿಯಿರಿ ಎಂದು ನಾವು ಲೋಕಾಯುಕ್ತ ಮಾಡಿಲ್ಲ. ಪಾರದರ್ಶಕ ಆಡಳಿತ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಮಾಡಿದ್ದೇವೆ. ಅದರ ಆಧಾರದಲ್ಲಿ ಲೋಕಾಯುಕ್ತ ಕೆಲಸ ಮಾಡುತ್ತಿದೆ ಎಂದರು.

ಬಿಜೆಪಿ ಸರ್ಕಾರ ಅಲ್ಲದೆ ಬೇರೆ ಆಡಳಿತದಲ್ಲಿ ಈ ರೀತಿ ಲೋಕಾಯುಕ್ತರು ಹೋಗಿ ದಾಳಿ ಮಾಡಲು ಸಾಧ್ಯವಿತ್ತಾ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದವರ ಮೇಲೆ ಸಣ್ಣಪುಟ್ಟ ಆರೋಪ ಬಂದಿದೆ. ಕಾನೂನು ಪ್ರಕಾರ ವ್ಯವಸ್ಥೆಯಾಗುತ್ತದೆ ಎಂದು ಹೇಳಿದ್ರು.