ಉಡುಪಿ: ಉಡುಪಿಯ ಜನತೆಗೆ ಪರಿಸರ ಸ್ನೇಹಿ ಉದ್ಯಮಗಳನ್ನು ಸ್ಥಾಪಿಸಿ, ಇಲ್ಲೇ ಉದ್ಯೋಗ ದೊರಕಿಸಿಕೊಟ್ಟರೆ ಹೆತ್ತವರೂ ಬಹಳ ಸಂತೋಷದಿಂದ ಮಕ್ಕಳ ಜತೆಗೇನೆ ಬದುಕುತ್ತಾರೆ. ಈ ನಿಟ್ಟಿನಲ್ಲಿ ತಾನು ಶಾಸಕನಾದ ಬಳಿಕ ತೀವ್ರವಾಗಿ ಪ್ರಯತ್ನ ಮಾಡುವುದಾಗಿ ಮತದಾರರಿಗೆ ಭರವಸೆ ನೀಡಿದರು.
ಕ್ಷೇತ್ರದಲ್ಲಿ ಉದ್ಯಮಗಳು ಬರಬೇಕಾದರೆ ಸುಸಜ್ಜಿತ ಮೂಲಭೂತ ಸೌಕರ್ಯಗಳೂ ಇರಬೇಕು ಅದಲ್ಲದೇ ಸಮಾಜದಲ್ಲಿ ಶಾಂತಿ ಸೌಹಾರ್ದತೆಯೂ ನೆಲೆಸಿರಬೇಕು, ಇವೆಲ್ಲವೂ ಸಾಧ್ಯ ಆಗಬೇಕಾದರೆ ಉಡುಪಿಯ ಜನ ತನಗೆ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ಉಡುಪಿ ಮತ್ತು ಬ್ರಹ್ಮಾವರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಹಳ ಮುಖ್ಯವಾಗಿ ಕುಡಿಯವ ನೀರಿನ ಸಮಸ್ಯೆ ಹಾಗೂ ಒಳ ಚರಂಡಿ ಸಮಸ್ಯೆ ಉಡುಪಿ ನಗರದಲ್ಲಿ ಮತದಾರರು ಎದುರಿಸುತ್ತಿರುವ ಸಮಸ್ಯೆ ಆಗಿದ್ದು ಇವುಗಳಿಗೆ ಒಂದು ವೈಜ್ಞಾನಿಕ ಪರಿಹಾರವನ್ನೂ ಹುಡುಕಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದರು.












