ಸಮಿತಿ ಸಭೆ: ಕಾನೂನು ಆಯೋಗದ ಜೊತೆ ಕೋವಿಂದ್ ನೇತೃತ್ವದಲ್ಲಿ ಸಭೆ

ನವದೆಹಲಿ : “ಒಂದು ದೇಶ, ಒಂದು ಚುನಾವಣೆ” ಸಾಧ್ಯತೆ ಬಗ್ಗೆ ಪರಿಶೀಲಿಸಲು ನೇಮಿಸಿರುವ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇತೃತ್ವದ ಸಮಿತಿಗೆ ಕಾನೂನು ಆಯೋಗವು ತನ್ನ ವಿಸ್ತೃತ ವರದಿಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ.”ಒಂದು ದೇಶ, ಒಂದು ಚುನಾವಣೆ” ನಡೆಸುವ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇತೃತ್ವದ ಸಮಿತಿಗೆ ವರದಿ ಸಲ್ಲಿಸಲು ಕಾನೂನು ಆಯೋಗ ಸಿದ್ಧತೆ ನಡೆಸಿದೆ.

ಕಾನೂನು ಆಯೋಗವು ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ಅಧ್ಯಕ್ಷತೆಯಲ್ಲಿ ಒಂದು ದೇಶ, ಒಂದು ಚುನಾವಣೆ ಕುರಿತ ತನ್ನ ವರದಿಯನ್ನು ತಿಂಗಳ ಆರಂಭದಲ್ಲಿಯೇ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಕಾನೂನು ಆಯೋಗವು ತನ್ನ ವರದಿಯನ್ನು ಸಲ್ಲಿಕೆ ಮಾಡಲಿದ್ದು, ಒಂದು ದೇಶ, ಒಂದು ಚುನಾವಣೆಯ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚೆ ನಡೆಸಲಿದೆ. ಇದರ ಜೊತೆಗೆ ಕಾನೂನು ಆಯೋಗದಿಂದ ಏಕರೂಪದ ಚುನಾವಣೆಗೆ ಬೆಂಬಲ ಪಡೆಯುವ ಮತ್ತು ಮುಂದಿನ ಏಕರೂಪದ ಚುನಾವಣೆಗೆ ಸಮಯವನ್ನು ನಿಗದಿಪಡಿಸುವ ಬಗ್ಗೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದೇಶದ ಹಿತದೃಷ್ಟಿಯಿಂದ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮನ್ವಯಗೊಳಿಸುವುದು ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂಗ್​ ಅವರ ನೇತೃತ್ವದ ಸಮಿತಿಯು ಉದ್ದೇಶವಾಗಿದೆ. 2014 ಮತ್ತು 2019ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು ಒಂದು ದೇಶ, ಒಂದು ಚುನಾವಣೆ ಸಂಬಂಧ ಪ್ರತಿಪಾದಿಸುತ್ತಾ ಬಂದಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದೇಶ, ಒಂದು ಚುನಾವಣೆ ಬಗ್ಗೆ ವಿವಿಧ ವೇದಿಕೆಯಲ್ಲಿ ಮಾತನಾಡುತ್ತಾ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್​ ರಾಮ್​ ಮೇಘ್​ವಾಲ್​ ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.ಕೋವಿಂದ್​ ನೇತೃತ್ವದ ಸಮಿತಿಯು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ಮಧ್ಯೆ ಕಾನೂನು ಆಯೋಗವು ವರದಿಯನ್ನು ನೀಡಲು ಮುಂದಾಗಿದೆ. ಈ ಸಂಬಂಧ ಚುನಾವಣಾ ಸುಧಾರಣೆ ಕುರಿತು ಚರ್ಚೆ ನಡೆಸಲು ಕಾನೂನು ಆಯೋಗ ಮತ್ತು ಸಮಿತಿ ಬುಧವಾರ ಸಭೆ ಸೇರಲಿವೆ ಎಂದು ತಿಳಿದುಬಂದಿದೆ.

ಒಂದು ದೇಶ, ಒಂದು ಚುನಾವಣೆ ಸಮಿತಿ ಸಂಬಂಧ ಕೇಂದ್ರ ಸರ್ಕಾರ ಸೆಪ್ಟೆಂಬರ್​ 2ರಂದು ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸೆಪ್ಟೆಂಬರ್​ 23ರಂದು ತನ್ನ ಮೊದಲ ಸಭೆಯನ್ನು ನಡೆಸಿತ್ತು. ಈ ಸಭೆಗೆ ಮಾನ್ಯತೆ ಪಡೆದ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ಆಹ್ವಾನ ನೀಡಲಾಗಿತ್ತು. ಜೊತೆಗೆ ಸಂಸದೀಯ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು.ಸಭೆಯಲ್ಲಿ ಇವರೆಲ್ಲರಿಂದ ಒಂದು ದೇಶ, ಒಂದು ಕಾನೂನು ಸಂಬಂಧ ಮಾಹಿತಿ ಕೋರಲಾಗಿತ್ತು. ಗೃಹ ಸಚಿವ ಅಮಿತ್ ಶಾ, ಕೇಂದ್ರ ಕಾನೂನು ಸಚಿವ ಅರ್ಜುನ್​ ರಾಮ್​ ಮೇಘವಾಲ್​ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರಮಟ್ಟದಲ್ಲಿ ಏಕಕಾಲದಲ್ಲಿ ನಡೆಯುವ ಚುನಾವಣೆಯಲ್ಲಿ ಕಾನೂನು ಆಯೋಗದ ಭಾಗವಹಿಸುವಿಕೆಯನ್ನು ಮತ್ತು ಏಕರೂಪದ ಚುನಾವಣೆಯ ಒಳನೋಟಗಳ ಬಗ್ಗೆ ಚರ್ಚೆ ನಡೆಸಲಾಯಿತು.