ಕರಾವಳಿ ಹಾಗೂ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ (SWR) ಮಹತ್ವದ ಮಾಹಿತಿ ನೀಡಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಜೂನ್ 15, 2026ರಿಂದ ಅಕ್ಟೋಬರ್ 20, 2026ರವರೆಗೆ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ 30 ನಿಮಿಷದಿಂದ 2 ಗಂಟೆಗಳವರೆಗೆ ವಿಳಂಬ ಉಂಟಾಗಲಿದೆ.
ಬದಲಾವಣೆಗೆ ಕಾರಣ ಇಲ್ಲಿದೆ
ಮಳೆಗಾಲದಲ್ಲಿ ಹಳಿಗಳ ಮೇಲೆ ನೀರು ನಿಲ್ಲುವುದು, ಗುಡ್ಡ ಕುಸಿತದ ಭೀತಿ ಹಾಗೂ ಸುರಕ್ಷತಾ ಕಾರಣಗಳಿಂದ ಕೊಂಕಣ ಮಾರ್ಗದಲ್ಲಿ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ವರ್ಷ ಮುಂಗಾರು ವೇಳಾಪಟ್ಟಿಯನ್ನು ಜಾರಿಗೊಳಿಸಲಾಗುತ್ತದೆ.
ಸಮಯ ಬದಲಾದ ಪ್ರಮುಖ ರೈಲುಗಳು
ಈ ಅವಧಿಯಲ್ಲಿ
16595/16596 ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್,
16585/16586 ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್,
16515/16516 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್,
12741/12742 ವಾಸ್ಕೋ ಡ ಗಾಮ-ಪಾಟ್ನಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಹಾಗೂ
11097/11098 ಪುಣೆ-ಎರ್ನಾಕುಲಂ ಎಕ್ಸ್ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
2 ಗಂಟೆಯವರೆಗೆ ವಿಳಂಬ ಸಾಧ್ಯತೆ
ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ಹಾಗೂ ಪಂಚಗಂಗಾ ಎಕ್ಸ್ಪ್ರೆಸ್ ರೈಲುಗಳು ಕೆಲವು ಭಾಗಗಳಲ್ಲಿ 2 ಗಂಟೆಗಳವರೆಗೆ ತಡವಾಗಿ ಸಂಚರಿಸಲಿವೆ. ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ ಹಾಗೂ ಸೂರತ್ಕಲ್ ಭಾಗಗಳಲ್ಲಿ ರೈಲುಗಳ ವೇಗ ಕಡಿಮೆಯಾಗಲಿದೆ.
ಇತರೆ ರೈಲುಗಳ ಮೇಲೂ ಪರಿಣಾಮ
ವಾಸ್ಕೋ ಡ ಗಾಮ-ಪಾಟ್ನಾ ರೈಲು 30ರಿಂದ 45 ನಿಮಿಷಗಳವರೆಗೆ ವಿಳಂಬವಾಗುವ ಸಾಧ್ಯತೆ ಇದೆ. ಪುಣೆ-ಎರ್ನಾಕುಲಂ ಎಕ್ಸ್ಪ್ರೆಸ್ ಹಾಗೂ ಮತ್ಸ್ಯಗಂಧ ಎಕ್ಸ್ಪ್ರೆಸ್ ಕೂಡ ಸಾಮಾನ್ಯ ವೇಳಾಪಟ್ಟಿಗಿಂತ ಸುಮಾರು 2 ಗಂಟೆಗಳವರೆಗೆ ತಡವಾಗಿ ಸಂಚರಿಸಲಿವೆ.
ಪ್ರಯಾಣಿಕರಿಗೆ ರೈಲ್ವೆಯ ಸಲಹೆ
ಈಗಾಗಲೇ ಟಿಕೆಟ್ ಕಾಯ್ದಿರಿಸಿರುವವರು ಹಾಗೂ ಮುಂದಿನ ದಿನಗಳಲ್ಲಿ ಪ್ರಯಾಣ ಯೋಜನೆ ಮಾಡಿಕೊಂಡಿರುವವರು ರೈಲುಗಳ ಪರಿಷ್ಕೃತ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ. ಪ್ರಯಾಣಕ್ಕೂ ಮೊದಲು IRCTC ವೆಬ್ಸೈಟ್ ಅಥವಾ NTES ಆ್ಯಪ್ ಮೂಲಕ ರೈಲುಗಳ ನಿಖರ ಆಗಮನ ಹಾಗೂ ನಿರ್ಗಮನ ಸಮಯವನ್ನು ಪರಿಶೀಲಿಸಿಕೊಳ್ಳುವುದು ಒಳಿತು.

















