ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸಂತೋಷ್ ರಾವ್ ಖುಲಾಸೆ ಆದೇಶ ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ

ಬೆಂಗಳೂರು: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ನನ್ನು ಖುಲಾಸೆಗೊಳಿಸಿದ ಕೇಂದ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸಂತೋಷ್‌ ರಾವ್‌ ನೈಜ ಆರೋಪಿ ಎನ್ನುವುದರ ಬಗ್ಗೆ ಪೂರ್ಣ ಸಾಕ್ಷ್ಯ ನೀಡಲು ವಿಫಲವಾಗಿದ್ದ ಸಿಬಿಐ ಮತ್ತೊಮ್ಮೆ ಪ್ರಕರಣವನ್ನು ಮುನ್ನಲೆಗೆ ತಂದಿದೆ.

ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ಹೋರಾಟದ ಬಳಿಕ ರಾಜ್ಯ ಸರ್ಕಾರ ಸಿಬಿಐಗೆ ತನಿಖೆ ಜವಾಬ್ದಾರಿ ಒಪ್ಪಿಸಿ ಅದರಂತೆ ಸಂಸ್ಥೆಯು ತನಿಖೆ ನಡೆಸಿತ್ತು. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಕೂಡಾ ನಡೆದಿತ್ತು. ಸಂತೋಷ್ ರಾವ್ ವಿರುದ್ಧ ಸಾಕ್ಷ್ಯಗಳಿಲ್ಲದ ಕಾರಣ ಹಾಗೂ ಆರೋಪಗಳನ್ನು ಸಾಬೀತುಪಡಿಸಲು ಸಿಬಿಐ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಕಾರಣ ಕೋರ್ಟು ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆ ಮಾಡಿತ್ತು. 2023ರ ಜುಲೈ 16ರಂದು ನೀಡಿದ ತೀರ್ಪಿನ ವಿರುದ್ಧ ಈಗ ಮೇಲ್ಮನವಿ ಸಲ್ಲಿಸಲಾಗಿದೆ.

ಜುಲೈ 16ರಂದು ಸಂತೋಷ್‌ ರಾವ್‌ ನಿರ್ದೋಷಿ ಎಂದು ತೀರ್ಪು ನೀಡಿದ್ದ ಬೆಂಗಳೂರು ಸಿಬಿಐ ವಿಶೇಷ ನ್ಯಾಯಾಲಯವು ಮೇಲ್ಮನವಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿತ್ತು. ಆದರೆ, ತೀರ್ಪು ಬಂದ ನಾಲ್ಕು ತಿಂಗಳ ಬಳಿಕ ಮನವಿ ಮಾಡಲಾಗಿದೆ. ಸಂತೋಷ್‌ ರಾವ್‌ ನಿಜವಾದ ಆರೋಪಿ ಎಂದು ಮೇಲ್ಮನವಿಯಲ್ಲಿ ಸಿಬಿಐ ವಾದ ಮಾಡಿದೆ ಮತ್ತು ಮರು ವಿಚಾರಣೆಯ ವೇಳೆ ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವ ಭರವಸೆ ನೀಡಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಈ ಪ್ರಕರಣದ ಮರು ತನಿಖೆ ಕೋರಿ ಬೆಂಗಳೂರಿನ ಶೇಷಾದ್ರಿಪುರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ ನವೀನ್ ಕುಮಾರ್ ಮತ್ತು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಆ ಸಂದರ್ಭದಲ್ಲಿ ಕೋರ್ಟು ಕೆಲವೊಂದು ಪರ್ಯಾಯ ಮಾರ್ಗಗಳನ್ನು ಸೂಚಿಸಿತ್ತು. ಪ್ರಕರಣದಲ್ಲಿ ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣಾಧೀನ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದ್ದು, ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನು ಪರಿಗಣಿಸಬಹುದಾಗಿದೆ ಎಂದು ಹೇಳಿತ್ತು. ಆದರೆ, ಮನೆಯವರು ಈ ಅವಕಾಶವನ್ನು ಇದುವರೆಗೆ ಬಳಸಿಕೊಂಡಿಲ್ಲ.

ಇದೀಗ ಸಿಬಿಐ ಮತ್ತೊಮ್ಮೆ ಕೋರ್ಟ್ ಕದ ತಟ್ಟಿದ್ದು, ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಕಾದುನೋಡಬೇಕಷ್ಟೆ.