ಗೇರು ಬೆಳೆಯಲ್ಲಿ ಎಲೆ ತಿನ್ನುವ ದುಂಬಿಗಳನ್ನು ಹೇಗೆ ನಿಯಂತ್ರಿಸೋದು :ಇಲ್ಲಿದೆ ಕೃಷಿಕರಿಗೆ ಸಲಹೆ

ಉಡುಪಿ : ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಗೇರು ಬೆಳೆಯಲ್ಲಿ ಎಲೆ ತಿನ್ನುವ ದುಂಬಿಗಳು ಕಾಣಿಸಿಕೊಳ್ಳುತ್ತಿದ್ದು, ಸೂಕ್ತ ಹತೋಟಿ ಕ್ರಮವನ್ನು ಕೈಗೊಳ್ಳುವುದು ಉತ್ತಮ.

ಈ ದುಂಬಿಗಳನ್ನು ವೈಜ್ಞಾನಿಕವಾಗಿ ಮೋನೊಲಿಪ್ಟಾ ಲೊಂಗಿಟಾರ್ಸಸ್ ಎಂದು ಕರೆಯಲಾಗುತ್ತದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಕಂಡು ಬರುವ ಪ್ರಮುಖ ಕೀಟವಾಗಿದ್ದು, ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ದುಂಬಿಗಳು, ಅಧಿಕ ಪ್ರಮಾಣದಲ್ಲಿ ಗುಂಪು ಗುಂಪಾಗಿ ಕಂಡು ಬಂದು, ಎಳೆಯ ಗಿಡಗಳು, ಮರದ ಚಿಗುರುಗಳು ಹಾಗೂ ಸಸ್ಯಾಗಾರದ ಗಿಡಗಳಲ್ಲಿ ಅಧಿಕ ಹಾನಿಯನ್ನುಂಟು ಮಾಡುತ್ತದೆ. ಮುಂಗಾರಿನ ಸಮಯದಲ್ಲಿ (ಜೂನ್-ಅಗಸ್ಟ್) ಈ ಕೀಟದ ಬಾಧೆಯು ಅಧಿಕವಾಗಿದ್ದು, ಚಿಗುರು ಎಲೆಗಳು ಹಾಗೂ ಕಾಂಡಗಳಿಗೆ ಹಾನಿಯನ್ನುಂಟು ಮಾಡುತ್ತವೆ.

ಹಾನಿಯ ಲಕ್ಷಣಗಳು : ದುಂಬಿಗಳು ಚಿಗುರೆಲೆಗಳ ತಳ ಭಾಗದಿಂದ ಪತ್ರ ಹರಿತ್ತನ್ನು ಕೆರೆದು ತಿನ್ನುವುದರಿಂದ, ಎಲೆಗಳು ಅಸ್ಥಿಪಂಜರದಂತಾಗಿ ಒಣಗಲಾರಂಭಿಸುತ್ತವೆ. ಇದೇ ರೀತಿಯಾಗಿ ಕಾಂಡದ ಮೃದು ಭಾಗವನ್ನು ಕೆರೆದು ತಿನ್ನುವುದರಿಂದ, ಕಾಂಡದ ತುದಿಯು ಸಂಪೂರ್ಣವಾಗಿ ಒಣಗಿದಂತಾಗುತ್ತದೆ.  ಈ ದುಂಬಿಗಳ ಜೊತೆಗೆ, ಮೈಲ್ಲೋಸೆರಸ್ ಜಾತಿಗೆ ಸೇರಿದ ಜೀರುಂಡೆಗಳು ಚಿಗುರೆಲೆಗಳು ಹಾಗೂ ಚಿಕ್ಕ ಗಿಡಗಳಿಗೆ ಅಧಿಕ ಹಾನಿಯನ್ನುಂಟು ಮಾಡುತ್ತವೆ.

ಹತೋಟಿ ಮಾಡೋದೇಗೆ?: ಕೀಟಗಳ ಬಾಧೆಯನ್ನು ತಡೆಗಟ್ಟಲು, ಮಾನೋಕ್ರೊಟೋಫಾಸ್ ಕೀಟನಾಶಕವನ್ನು 1.5 ಮಿ.ಲೀ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಹೆಚ್ಚಿನ ಮಾಹಿತಿಗಾಗಿ, ಡಾ.ಸಚಿನ್ ಯು.ಎಸ್, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) (8095313797) ಹಾಗೂ ಡಾ. ಧನಂಜಯ ಬಿ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ICAR ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಉಡುಪಿ ಜಿಲ್ಲೆ ಇವರನ್ನು ಸಂಪರ್ಕಿಸಬಹುದು.