ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ ಕುಂದಾಪುರ ತಾಲೂಕಿನ ಶಂಕರನಾರಾಯಣ ಸರ್ಕಾರಿ ಪ್ರ.ದ.ಕಾಲೇಜಿನ ಅಂತಿಮ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಕಮ್ಯೂನಿಕೇಶನ್ ಸ್ಕಿಲ್ಸ್, ವ್ಯಕ್ತಿತ್ವ ವಿಕಸನ, ಸಂದರ್ಶನ ಕಲೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಇದೇ ಸಂದರ್ಭದಲ್ಲಿ ಉನ್ನತಿ ಸಂಸ್ಥೆ ಹಾಗೂ ಕಾಲೇಜಿನ ನಡುವೆ ಕೌಶಲ್ಯ ಕರ್ನಾಟಕ ಯೋಜನೆಯಡಿ ಬ್ಯಾಂಕಿಂಗ್ ಹಾಗೂ ಫೈನಾನ್ಶಿಯಲ್ ಕ್ಷೇತ್ರದಲ್ಲಿ ಉಚಿತ ತರಬೇತಿ ನೀಡುವ ಬಗ್ಗೆ ಒಪ್ಪಂದ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಉನ್ನತಿ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ಗ್ರಾಮೀಣ ಪ್ರದೇಶವಾದ ಶಂಕರನಾರಾಯಣದ ವಿದ್ಯಾರ್ಥಿಗಳು ಕೂಡಾ ಉತ್ತಮ ತರಬೇತಿಯ ಮೂಲಕ ನಗರ ಪ್ರದೇಶದ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಈ ತರಬೇತಿಗಳನ್ನು ಉಚಿತವಾಗಿ ನಮ್ಮ ಸಂಸ್ಥೆ ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಗಂಗರಾಜು, ಡಾ.ಶ್ರೀನಿವಾಸ್,ಗಿರೀಶ್, ಉನ್ನತಿ ಸಂಸ್ಥೆಯ ನವೀನ್, ರಾಜೇಶ್ ಉಪಸ್ಥಿತರಿದ್ದರು.