ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವ: ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆಗೆ ರಘುಪತಿ ಭಟ್ ರಿಂದ ಚಾಲನೆ

ಉಡುಪಿ: ಕಲ್ಮಾಡಿಯಲ್ಲಿನ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವದ ಸಂದರ್ಭ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಆದಿವುಡುಪಿ ಜಂಕ್ಷನ್ ನಿಂದ ಕಲ್ಮಾಡಿ ಚರ್ಚಿನವರೆಗೆ ನಡೆಯಿತು.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್‌ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಹೊಸ ವರುಷದಂದು ಕಲ್ಮಾಡಿ ಚರ್ಚಿಗೆ ಭೇಟಿ ನೀಡುತ್ತಿದ್ದನ್ನು ಅವರು ನೆನಪಿಸಿಕೊಂಡರು. ಉಡುಪಿ ಧರ್ಮಕ್ಷೇತ್ರದಲ್ಲಿ ಅತ್ತೂರು, ಕೆರೆಕಟ್ಟೆ ಬಳಿಕ ಕಲ್ಮಾಡಿ ಮೂರನೇ ಪುಣ್ಯಕ್ಷೇತ್ರವಾಗಿ ಘೋಷಿಸಲ್ಪಡುವುದು ಸಂತೋಷದ ವಿಷಯವೆಂದರು.

ಕಲ್ಮಾಡಿ ಚರ್ಚಿಗೆ ಅನೇಕ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪುಣ್ಯಕ್ಷೇತ್ರ ಘೋಷಣೆ ನಂತರ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗಲಿರುವುದು. ಆದಿವುಡುಪಿಯಿಂದ ಮಲ್ಪೆವರೆಗಿನ ರಸ್ತೆಯು ಶೀಘ್ರದಲ್ಲಿ ಚತುಷ್ಪಥವಾಗಿ ಮಾರ್ಪಾಡಾಗಲಿದ್ದು, ಮಲ್ಪೆ ಬೀಚಿಗೆ ಹಾಗೂ ಕಲ್ಮಾಡಿ ಚರ್ಚಿಗೆ ಭೇಟಿ ನೀಡಲಿರುವ ಯಾತ್ರಿಕರಿಗೆ ನೆರವಾಗಲಿರುವುದು.

ಈ ವೇಳೆ ಕಲ್ಮಾಡಿ ವಾರ್ಡಿನ ಕೌನ್ಸಿಲರ್ ಸುಂದರ ಕಲ್ಮಾಡಿ, ಚರ್ಚಿನ ಧರ್ಮಗುರುಗಳಾದ ವಂ. ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ. ರೋಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶ್ರೀಮತಿ ಶೋಭಾ ಮೆಂಡೋನ್ಸಾ, 20 ಆಯೋಗಗಳ ಸಂಯೋಜಕಿ ಶ್ರೀಮತಿ ಐಡಾ ಡಿಸೋಜಾ, ಸುವರ್ಣ ಮಹೋತ್ಸವದ ಸಂಯೋಜಕ ಸಂದೀಪ್ ಅಂದ್ರಾದೆ ಹಾಜರಿದ್ದರು.

ಕಲ್ಮಾಡಿಯಲ್ಲಿನ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವವು ಆಗಸ್ಟ್ 15 ರಂದು ನಡೆಯಲಿರುವುದು.