ದೋಣಿ ಮುಳುಗಡೆ; ಓರ್ವ ಮೀನುಗಾರ ಮೃತ್ಯು, ಇನ್ನೋರ್ವ ನಾಪತ್ತೆ

ಬೈಂದೂರು: ಮೀನುಗಾರಿಕೆಗೆ ತೆರೆಳಿದ ಜೈ ಗುರೂಜಿ ಪಟ್ಟೆಬಲೆ ಎಂಬ ದೋಣಿ ಮುಳುಗಡೆಯಾಗಿ ಓರ್ವ ಮೀನುಗಾರ ಮೃತಪಟ್ಟಿದ್ದು, ಇನ್ನೋರ್ವ ಮೀನುಗಾರ ನಾಪತ್ತೆಯಾಗಿರುವ ಘಟನೆ ಶುಕ್ರವಾರ ರಾತ್ರಿ ಪಡುವರಿ ಗ್ರಾಮದ ತಾರಾಪತಿ – ಅಳ್ವೆಕೋಡಿಗೆಯಲ್ಲಿ ಸಂಭವಿಸಿದೆ.

ಮೃತ ಮೀನುಗಾರನನ್ನು ಚರಣ್ ಖಾರ್ವಿ (27) ಎಂದು ಗುರುತಿಸಲಾಗಿದೆ. ಅಣ್ಣಪ್ಪ ಮೊಗವೀರ (45) ನಾಪತ್ತೆಯಾಗಿದ್ದಾರೆ. ಈ ಇಬ್ಬರು ಸೇರಿದಂತೆ ಒಟ್ಟು 7 ಜನರು ಮೀನುಗಾರಿಕೆಗೆ ತೆರೆಳಿದ್ದರು.

ಘಟನೆಯ ವಿವರ : ಮಧ್ಯಾಹ್ನದ ಬಳಿಕ ಅಳುವೆಕೋಡಿಯಿಂದ ಮೀನುಗಾರಿಕೆಗೆ ಜೈ ಗುರೂಜಿ ಹೆಸರಿನ ನಾಡದೋಣಿಯಲ್ಲಿ 7 ಮಂದಿ ಮೀನುಗಾರಿಕೆರೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ತಾರಾಪತಿ ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಯ ಹೊಡೆತಕ್ಕೆ ದೋಣಿ ಮುಗುಚಿದ್ದು, ಬಲೆಯ ಅಡಿಗೆ ಸಿಲುಕಿದ್ದ ಇಬ್ಬರು ನಾಪತ್ತೆಯಾಗಿದ್ದರು. ಚರಣ್ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದ್ದು, ಇನ್ನೋರ್ವ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕರಾವಳಿ ಪೊಲೀಸ್ ಕಾವಲು ಪಡೆ, ಬೈಂದೂರು ಅಗ್ನಿಶಾಮಕದಳ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಬೈಂದೂರು ಪೊಲೀಸ್ ಠಾಣಾಧಿಕಾರಿ ಪವನ್ ನಾಯ್ಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.