ಬ್ರಹ್ಮಾವರ: ಗಾಂಧಿ ತತ್ವಗಳ ವಿಚಾರ ಸಂಕಿರಣ

ಉಡುಪಿ: ಗಾಂಧಿಯು ಮಹಾತ್ಮನೆನಿಸಿಕೊಂಡು ಜಗತ್ತಿನಲ್ಲೇ ಮಾನ್ಯವಾದರು. ಅವರು ಅಳವಡಿಸಿಕೊಂಡ ತತ್ವಗಳು ಅವರನ್ನು ಅಷ್ಟು ಎತ್ತರಕ್ಕೇರಿಸಿತ್ತು. ಇಂದಿಗೂ ಗಾಂಧೀಜಿ ಹಲವಾರು ವಿಚಾರಗಳಲ್ಲಿ ಪ್ರಸ್ತುತವೆನಿಸಿಕೊಳ್ಳುತ್ತಾರೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲ ಕೆ.ಶೆಟ್ಟಿ ತಿಳಿಸಿದರು.

ಅವರು ಶನಿವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಯೋಗದಲ್ಲಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಹಾತ್ಮ ಗಾಂಧಿಯ 150 ನೇ ಜನ್ಮ ದಿನಾಚರಣೆ ಪ್ರಯುಕ್ತ ಒಂದು ದಿನದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಶಿಕ್ಷಣ ಸಂಸ್ಥೆಗಳ ಸಮನ್ವಯಾಧಿಕಾರಿ ಮಹಾಬಲೇಶ್ವರ ರಾವ್, ಗಾಂಧೀಜಿಯವರ ಸ್ವದೇಶೀಯತೆ ಮತ್ತು ಅಹಿಂಸಾತ್ವದ ಕಿರು ಪರಿಚಯ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ಈ ಸಂದರ್ಭದಲ್ಲಿ ಗಾಂಧಿಯ ಅನುಯಾಯಿಯಾಗಿದ್ದ ಬೈಕಾಡಿ ವೆಂಕಟಕೃಷ್ಣ ರಾವ್ ಇವರ ಆತ್ಮಚರಿತ್ರೆಯ ಬಗ್ಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಅಜಪುರ ಸಂಘದವರಿಂದ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಬ್ರಹ್ಮಣ್ಯ ಜೋಶಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನಚಂದ್ರ ನಾಯಕ್, ಉಪಪ್ರಾಂಶುಪಾಲ ಬಿ.ಟಿ ನಾಯ್ಕ್, ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಮತ್ತು ಕಾರ್ಯಕ್ರಮದ ಸಂಘಟಕರಾದ ಸವಿತಾ ಎರ್ಮಾಳ್, ಅಶೋಕ ಭಟ್, ನಾರಾಯಣ ಮಡಿ, ಸೀತಾರಾಮ ಶೆಟ್ಟಿ, ಮಾಧವ ನಾಯ್ಕ್ ಬಿ.ವಿ.ಟಿ ಮಣಿಪಾಲದ ಲಕ್ಷ್ಮಿ ಬಾಯಿ, ವಂದನಾ ನಾಯಕ್, ಅನುರಾಧ ಎಚ್., ಉಪನ್ಯಾಸಕರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಜೋಗಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಪ್ರಾಂಶುಪಾಲ ರವೀಂದ್ರ ಉಪಾಧ್ಯ ಸ್ವಾಗತಿಸಿದರು. ಜಯಂತಿ ಮತ್ತು ಪ್ರತಿಮ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಶಂಕರ ನಾಯ್ಕ್ ವಂದಿಸಿದರು. ಸ್ವಯಂ ಸೇವಕರಿಗೆ ಗಾಂಧಿಯ ಆತ್ಮಕತೆ ಪುಸ್ತಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು