ಬ್ರಹ್ಮಾವರ: ಭಾರೀ ಗಾಳಿ ಮಳೆಗೆ ಶಾಲೆಯ ಹೆಂಚು ಬಿದ್ದು ವಿದ್ಯಾರ್ಥಿನಿಗೆ ಗಾಯ

ಉಡುಪಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದ ರಾತ್ರಿಯಿಂದ ಸುರಿದ ಭಾರೀ ಗಾಳಿ ಮಳೆಗೆ 15 ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಈ ಮಧ್ಯೆ ಬ್ರಹ್ಮಾವರ ತಾಲೂಕಿನಲ್ಲಿ ಹಳೆಯ ಶಾಲಾ ಕಟ್ಟಡದ ಹೆಂಚು ಬಿದ್ದ ಪರಿಣಾಮ ವಿದ್ಯಾರ್ಥಿನಿಗೆ ಗಾಯವಾಗಿದೆ.ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಭಾರೀ ಗಾಳಿಯೊಂದಿಗೆ ಮಳೆಯಾಗಿತ್ತು.

ಈ ವೇಳೆ ಬೀಸಿದ ಭಾರಿ ಗಾಳಿ ಮಳೆಗೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬೋರ್ಡ್ ಪ್ರೈಮರಿ ಶಾಲೆಯ ಮೇಲ್ಚಾವಣೆಯ ಹೆಂಚು ಬಿದ್ದು ಓರ್ವ ವಿದ್ಯಾರ್ಥಿನಿಯ ಕಾಲಿಗೆ ಸಣ್ಣ ಗಾಯವಾಗಿದೆ.

ಇದೇ ವೇಳೆ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದಲ್ಲದೆ ಅಲ್ಲಲ್ಲಿ ಮರಗಳು ಉರುಳಿಬಿದ್ದ ಬಗ್ಗೆ ವರದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ವಾಡಿಕೆಗಿಂತ ಕಮ್ಮಿಯಾಗಿದ್ದರೂ ಭಾರೀ ಗಾಳಿಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ.