ಬ್ರಹ್ಮಾವರ: ಪಿಗ್ಮಿ ಸಂಗ್ರಹಕನ ಹಣ ಕಳವು ಪ್ರಕರಣ: ಅಂತರ್ ರಾಜ್ಯ ಕಳ್ಳನ ಬಂಧನ

ಉಡುಪಿ: ಬೈಕಿನ ಸೈಡ್ ಬಾಕ್ಸ್ ನಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರ್ ರಾಜ್ಯ ಕಳ್ಳನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂತೋಷ್‌ ಹನುಮಂತ ಕಟ್ಟಿಮನಿ (39) ಬಂಧಿತ ಆರೋಪಿ. ಈತನಿಂದ ಕಳವು ಮಾಡಿದ 32000ರೂ. ನಗದು ಹಾಗೂ ಮೊಬೈಲ್‌ನ್ನು ವಶಪಡಿಸಕೊಳ್ಳಲಾಗಿದೆ.

ಸೊಸೈಟಿಯೊಂದರ ಪಿಗ್ಮಿ ಸಂಗ್ರಹಕರು ಆ.4ರಂದು ಸಂಜೆ ಬ್ರಹ್ಮಾವರ ಶಿವಳ್ಳಿ ಹೋಟೆಲ್‌ ಎದುರುಗಡೆ ಕರ್ನಾಟಕ ಬ್ಯಾಂಕ್‌ ಎಟಿಎಮ್‌ ಬಳಿ ಪಿಗ್ಮಿ ಕಲೆಕ್ಷನ್‌ ಮಾಡಿದ ನಗದನ್ನು ಬೈಕ್ ನ ಸೈಡ್‌ ಬಾಕ್ಸ್‌ನಲ್ಲಿ ಇಟ್ಟು ಬೀಗ ಹಾಕಿ ಹೋಟೆಲ್‌ಗೆ ಹೋಗಿ ಪಿಗ್ಮಿ ಕಲೆಕ್ಷನ್‌ ಮಾಡಿದ್ದರು.

ಬಳಿಕ ವಾಪಾಸು ಬಂದು ನೋಡಿದಾಗ ಬೈಕ್ ನ ಬಾಕ್ಸ್‌ನಲ್ಲಿ ಇಟ್ಟ ನಗದು ಹಣವು ಕಾಣದೇ ಇದ್ದು ಪರಿಶೀಲಿಸಿದಾಗ ಬಾಕ್ಸ್ ನ ಬೀಗ ಒಡೆದು ಬಾಕ್ಸ್‌ನಲ್ಲಿದ್ದ ನಗದು ಹಣವನ್ನು ಮತ್ತು ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಇತರೆ ದಾಖಲೆ ಪತ್ರವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.