ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ಬೆಳ್ತಂಗಡಿ: ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಕ್ಕಿಂಜೆ ಸಮೀಪದ ಚಿಬಿದ್ರೆ ಗ್ರಾಮದ ಅನ್ನಾರು ಭಾನುವಾರ ಸಂಭವಿಸಿದೆ.

ಮೃತ ಬಾಲಕನನ್ನು ಇನಾಯತುಲ್ಲಾ (8) ಎಂದು ಗುರುತಿಸಲಾಗಿದೆ. ಬಾಲಕ ತಂದೆ ತಾಯಿಯ ಜತೆ ಅಜ್ಜಿ ಮನೆ ಕಕ್ಕಿಂಜೆಗೆ ಬಂದಿದ್ದನು. ಭಾನುವಾರ ಊಟ ಮುಗಿಸಿ ಬಾಲಕ ಮನೆಯವರೊಂದಿಗೆ ನದಿಗೆ ತೆರಳಿದ್ದನು.

ನದಿ ದಡದಲ್ಲಿ ಆಡುತ್ತಿದ್ದ ಇನಾಯತುಲ್ಲಾ ಮನೆಯವರ ಮುಂದೆಯೇ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ನೀರಿನಿಂದ‌ ಮೇಲೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿಂದ ಬೆಳ್ತಂಗಡಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.