ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುವ ಕ್ಲಬ್ ಪಬ್ ಹಾಗೂ ಮಟ್ಕಾ ದಂಧೆ ನಿಲ್ಲಿಸಲು ಬಿಜೆಪಿ ಒತ್ತಾಯ

ಉಡುಪಿ: ಜಿಲ್ಲೆಯ ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಪರವಾನಿಗೆ ಇಲ್ಲದೆ, ಅಬಕಾರಿ ಇಲಾಖೆಯ ಸಿಎಲ್ 7 ಮತ್ತು ಸಿಎಲ್ 9 ಬಳಸಿಕೊಂಡು ಪಬ್ಬುಗಳಲ್ಲಿ ಮತ್ತು ಡಿಸ್ಕೋಗಳಲ್ಲಿ ಡಿಜೆ ಮ್ಯೂಸಿಕ್ ಬಳಸಿ ಚಟುವಟಿಕೆ ನಡೆಸುತ್ತಿದ್ದು, ಸದ್ರಿ ಚಟುವಟಿಕೆಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಬಕಾರಿ ಇಲಾಖೆಯ ಕಾನೂನಿನಂತೆ ಬಾರ್ ಮತ್ತು ರೆಸ್ಟೋರೆಂಟ್‌ ಗಳು ನಿಗದಿತ ಮುಕ್ತಾಯ ಅವಧಿಯ ನಂತರವೂ ತನ್ನ ವ್ಯವಹಾರವನ್ನು ಯಾವುದೇ ಅಳುಕಿಲ್ಲದೆ
ನಡೆಸಿಕೊಂಡಿವೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಉಡುಪಿ ಜಿಲ್ಲೆಯಾದ್ಯಂತ ರಿಕ್ರಿಯೇಷನ್ ಕ್ಲಬ್‌ನ ಹೆಸರಿನಲ್ಲಿ ಇಸ್ಪಿಟ್ ಕ್ಲಬ್‌ಗಳು ದಿನದ 24 ಗಂಟೆಯೂ
ತೆರೆದಿರುವುದು ಜಗಜ್ಜಾಹೀರಾಗಿದೆ. ಮಣಿಪಾಲದ ಡಿಸಿ ಕಛೇರಿ ರಸ್ತೆಯಲ್ಲಿರುವ ಕೆಲವು ರೆಸ್ಟೋರೆಂಟ್‌ಗಳು ಮುಂಜಾನೆ 3 ಗಂಟೆಯವರೆಗೂ ತೆರೆದಿರುತ್ತದೆ. ಮಣಿಪಾಲದ ಬಾರ್ ಮತ್ತು ರೆಸ್ಟೋರೆಂಟ್‌ಗಳು ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್‌ಗಳು ಡ್ರಗ್ಸ್ ಸೇವನೆಯ ಅಡ್ಡೆಯಾಗಿವೆ. ಮಣಿಪಾಲವು ಡ್ರಗ್ಸ್ ಕೇಂದ್ರವಾಗಿ ಬೆಳೆಯುತ್ತಿರುವುದು ಸ್ಥಳೀಯ ವಿದ್ಯಾರ್ಥಿಗಳು, ಯುವಜನತೆ ಮತ್ತು ಹೊರ ಊರಿನಿಂದ ಮತ್ತು ಹೊರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ಯುವಜನತೆಯ ಜೀವನವನ್ನು ಹಾಳುಗೆಡವುತ್ತಿದೆ.

ಉಡುಪಿ ಮತ್ತು ಮಣಿಪಾಲದಲ್ಲಿ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಪಬ್ಬುಗಳು, ಕ್ಲಬ್ಬುಗಳು ಮತ್ತು ಅವಧಿ ಮೀರಿ ವ್ಯವಹಾರ ನಡೆಸುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್‌ ಗಳ ಮೇಲೆ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಮಟ್ಕಾ ದಂಧೆಗಳ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಇವನ್ನು ಪ್ರತಿಬಂಧಿಸಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.