ಬೈಂದೂರು: ಕಾಂಗ್ರೆಸ್ ಕೈ ಹಿಡಿದ ಕಮಲ ಕಾರ್ಯಕರ್ತರು

ಬೈಂದೂರು: ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳನ್ನು ಒಪ್ಪಿ ಬೈಂದೂರು ವಿಧಾನಸಭಾ ಕ್ಷೇತ್ರದ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್‌ ಕುಟುಂಬಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಕಳೆದೊಂದು ತಿಂಗಳಿನಿಂದ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಪಕ್ಷದ ಬಾವುಟಗಳನ್ನು ಹಿಡಿದಿದ್ದಾರೆ.

ಕಟ್‌ ಬೇಲ್ತೂರಿನ ಬಿಜೂರು 3ನೇ ಹಾಗೂ 4ನೇ ವಾರ್ಡ್ ನ ಸಕ್ರಿಯ ಬಿಜೆಪಿಯ ಕಾರ್ಯಕರ್ತರು ಬಿಜೂರು ವಜ್ರದುಂಬಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ದೇವಾಡಿಗ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸರಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್‌ ಪಕ್ಷದ ಬಾವುಟ ನೀಡಿ, ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಿ ದೇವಾಡಿಗ, ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜಗದೀಶ್ ದೇವಾಡಿಗ, ಭರತ್ ದೇವಾಡಿಗ, ಸೋಮಶೇಖರ್ ಪೂಜಾರಿ, ಮಂಜುನಾಥ, ಸುಶೀಲ ದೇವಾಡಿಗ ಉಪಸ್ಥಿತರಿದ್ದರು.