ಉಡುಪಿ: ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಆಶ್ರಯದಲ್ಲಿ ನಡೆಸುವ ಸಾಪ್ತಾಹಿಕ ನೃತ್ಯಸರಣಿ ನೃತ್ಯಶಂಕರ ಸರಣಿ 43ರಲ್ಲಿ ಬೆಂಗಳೂರಿನ ವಿದುಷಿ ಸ್ಮೃತಿಯವರಿಂದ ಭರತನಾಟ್ಯ ಸೋಮವಾರದಂದು ಸಂಪನ್ನಗೊಂಡಿತು. ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೆ ಪ್ರತಿ ಸೋಮವಾರ ವೇದಿಕೆಯನ್ನು ನೃತ್ಯ ಶಂಕರ ಸರಣಿ ಮೂಲಕ ಕೊಡವೂರು ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಅನುವು ಮಾಡಿ ಕೊಡುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ.
ಸ್ಮೃತಿಯ ಸಾಧನಾಪಥ: 2-3ನೇ ತರಗತಿಯ ಪುಟ್ಟ ಸ್ಮೃತಿ ಶಾಲೆಯ ವಿವಿಧ ಸಾಂಸ್ಕತಿಕ ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ, ತನಗೇ ಅರಿವಿಲ್ಲದೆ ನೃತ್ಯದಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಹೀಗೆ ಭರತನಾಟ್ಯ ಎಂಬುದು ಸ್ಮೃತಿಯವರ ಜೀವನದಲ್ಲಿ ಚಿಕ್ಕ ವಯಸ್ಸಿನಿಂದಲೇ ಅವಿಭಾಜ್ಯ ಅಂಗವಾಗಿದೆ.
![](https://udupixpress.com/wp-content/uploads/2024/04/image-32-1024x682.png)
ಇನ್ನು ಇವರು ಶಾಸ್ತ್ರೀಯ ನೃತ್ಯ ಅಭ್ಯಾಸವನ್ನು ತಮ್ಮ 8ನೇ ವಯಸ್ಸಿನಲ್ಲಿ ಚೆನ್ನೈನ ‘ಕಲಾಕ್ಷೇತ್ರ’ದ ಹಿರಿಯ ವಿದ್ಯಾರ್ಥಿನಿಯಾದ, ಗುರು ಶ್ರೀವಿದ್ಯಾ ಆನಂದ್ ರಲ್ಲಿ ಆರಂಭಿಸಿ, ಶಾಲಾ ಕಾಲೇಜುಗಳಲ್ಲಿ ಅನೇಕ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಮುಂದೆ, ‘ಕಲಾಕ್ಷಿತಿ ನೃತ್ಯಶಾಲೆ’ ಯ ಸಂಸ್ಥಾಪಕರಾದ, ಕಿಟ್ಟು ಸರ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯಲ್ಪಡುವ ಡಾ| ಪ್ರೊ. ಕೃಷ್ಣಮೂರ್ತಿ ಯವರ ಗರಡಿಯಲ್ಲಿ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.
ಕಲಾಕ್ಷಿತಿ ಶಾಲೆಯು, ನೃತ್ಯಪಾಠ ಮಾತ್ರಕ್ಕೆ ಸೀಮಿತವಾಗದೇ, ವಿದ್ಯಾರ್ಥಿಗಳ ಸಾರ್ವತ್ರಿಕ ಬೆಳವಣಿಗೆಗೂ ಪ್ರಾಮುಕ್ಯತೆ ನೀಡುವುದರಿಂದ, ಸ್ಮೃತಿಯ ವ್ಯಕ್ತಿತ್ವ ಬೆಳವಣಿಗೆಯಲ್ಲಿಯೂ ಕಲಾಕ್ಷಿತ ಅತ್ಯಂತ ಪ್ರಭಾವಬೀರಿದೆ.ಕಿಟ್ಟು ಸರ್ ನೃತ್ಯದ ಮೇಲಿಟ್ಟಿರುವ ಪ್ರೀತಿ ಎಲ್ಲರಿಗೂ ಸ್ಫೂರ್ತಿದಾಯಕ. ಗುರುಗಳ ನೇತೃತ್ವದಲ್ಲಿ ಸ್ಮೃತಿ ಕಲಾಕ್ಷಿತಿ ಶಾಲೆಯ ಪ್ರಸ್ತುತಿಗಳಾದ, ‘ಗೋಕುಲ ನಿರ್ಗಮನ’, ‘ಅಕ್ಕ ಮಹಾದೇವಿ’, ‘ರುಕ್ಮಿಣಿ ದೇವಿ ಅರುಂಡೇಲ್ ರ ಹುಟ್ಟುಹಬ್ಬ’ ಹಾಗೂ ಇನ್ನೂ ಹಲವಾರು ಪ್ರತಿಷ್ಠಿತ ವೇದಿಕೆ ಗಳಲ್ಲಿಯೂ ಕಾರ್ಯಕ್ರಮ ನೀಡಿರುತ್ತಾರೆ.
![](https://udupixpress.com/wp-content/uploads/2024/04/image-33-1024x1024.png)
ಸ್ಮೃತಿ, ಬೆಂಗಳೂರು ವಿಶ್ವ ವಿದ್ಯಾಲಯದ ಅಡಿ MBA ಪದವಿ ಪಡೆದಿದ್ದು, ಪ್ರಸ್ತುತ ‘stoneX ಗ್ರೂಪ್ಸ್’ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸ್ಟೇಟ್ ಸೆಕೆಂಡರಿ ಎಕ್ಸಾಮಿನಟ್ ಬೋರ್ಡ್ ನಡೆಸುವ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ.
ಸ್ಮೃತಿ ಸಂಗೀತಾಭ್ಯಾಸವನ್ನು ಗುರು ಲಕ್ಷ್ಮೀ ರಾಮಚಂದ್ರನ್ ಹಾಗೂ ದಿ. ಅಂಬಾ ವೆಂಕಟರಾಮನ್ ರವರ ಬಳಿ ಮಾಡಿರುತ್ತಾರೆ.
ಇವರ ನೃತ್ಯ ಕಲಿಕೆಗೆ ಬೆನ್ನೆಲುಬಾಗಿ ತಂದೆ ಸುರೇಶ್ ಉಪಾಧ್ಯಾಯ ಹಾಗೂ ತಾಯಿ ವೈಶಾಲಿ ಚಿಕ್ಕ ವಯಸ್ಸಿನಿಂದಲೂ ಜೊತೆಗೆ ಸಾಥ್ ನೀಡುತ್ತಾ ಬಂದಿದ್ದಾರೆ. ಇವರ ಸಾಧನೆಗೆ ಜೊತೆಯಲ್ಲೇ ಇದ್ದು ಇವರ ಪತಿ ಅರವಿಂದ್ ಕಾಮತ್ ಸ್ಮೃತಿಯವರ ಕಲೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇವರೆಲ್ಲರ ಪ್ರೀತಿ, ಪರಿಶ್ರಮದಿಂದ, ಪ್ರಸ್ತುತ ಸ್ಮೃತಿ ತಮ್ಮ ಹೊರಮಾವು ನಿವಾಸದಲ್ಲಿ ‘ ಕಲಾರ್ಪನ ‘ ನೃತ್ಯ ಶಾಲೆಯನ್ನು ಆರಂಭಿಸಿ ಮಕ್ಕಳಿಗೆ ನೃತ್ಯ ಪಾಠ ಮಾಡುತ್ತಿದ್ದಾರೆ.
ಇವರು ತಮ್ಮ ಕಲಿಕೆ, ಅನುಭವ ಇವೆಲ್ಲವನ್ನೂ ತಮ್ಮ ಶಿಷ್ಯವೃಂದಕ್ಕೆ ಧಾರೆ ಎರೆಯುವ ಸದುದ್ದೇಶ ಹೊಂದಿದ್ದಾರೆ. ಈಗ ಸ್ಮೃತಿ ಅವರು ಪಾರ್ಶ್ವನಾಥ ಉಪಾಧ್ಯೆ ಶ್ರುತಿ ಗೋಪಾಲ್, ಪಿವಿ ಅಧಿತ್ಯ ರವರಿಂದ ತಮ್ಮ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.