ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಮಂಗಲೋತ್ಸವ ಸಂಪನ್ನ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಮಂಗಲೋತ್ಸವವು ಆದಿತ್ಯವಾರ ಸಂಪನ್ನಗೊಂಡಿತು. ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿಯವರ ಮಾರ್ಗದರ್ಶನದಲ್ಲಿ 1 ವಾರಗಳ ಕಾಲ ಊರ ಪರವೂರ ಸಂತ ಮಂಡಳಿ ಸಹಕಾರ ದೊಂದಿಗೆ ಅಹೋರಾತ್ರಿ ಭಜನೆ ಜರುಗಿತು.

ದೇವಳದ ಪ್ರಧಾನ ಅರ್ಚಕ ಜಯದೇವ ಭಟ್, ಗಣಪತಿ ಭಟ್, ಧಾರ್ಮಿಕ ಪೂಜಾ ವಿಧಾನಗಳನ್ನು ನೆರವೇರಿಸಿದರು. ಭಜನಾ ಸಮಿತಿಯ ಅಧ್ಯಕ್ಷ ಕೆ. ತುಳಸೀದಾಸ್ ಕಿಣಿ, ಉಪಾಧ್ಯಕ್ಷ ಸೀತಾರಾಮ್ ಭಟ್, ದೇವಳದ ಆಡಳಿತ ಮಂಡಳಿಯ ಸದಸ್ಯರು, ಭಜನಾ ಮಹೋತ್ಸವ ಸಮಿತಿಯ ಸದಸ್ಯರು, ಜಿ ಎಸ್ ಬಿ ಸಭಾ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

ಮಂಗಲೋತ್ಸವ ಅಂಗವಾಗಿ ಪೇಟೆ ಉತ್ಸವ, ಶ್ರೀ ದೇವರ ಪಲ್ಲಕಿ ಉತ್ಸವ, ಉರುಳು ಸೇವೆ ಜರುಗಿತು. ಓಕುಳಿ ಸಂಭ್ರಮದಲ್ಲಿ ಯುವಕರು ಬಣ್ಣದಾಟವಾಡಿದರು, ಭಜನಾ ಮಹೋತ್ಸವದ ಶ್ರೀ ವಿಠೋಭ ರುಖುಮಾಯಿ ಶ್ರೀ ದೇವರಿಗೆ ಸಂಪರ್ಪಿಸಿದ ಫಲ ವಸ್ತುಗಳನ್ನು ಹರಾಜು ಮಾಡಲಾಯಿತು. ಭಜನಾ ಪಾಳಿದಾರರಿಗೆ ಗೌರವಾರ್ಪಣೆ ನಡೆಸಲಾಯಿತು. ಮಹಾ ಪೂಜೆ ಬಳಿಕ ಮಹಾ ಸಮಾರಾಧನೆಯಲ್ಲಿ ನೂರಾರು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.