ಮಲ್ಪೆ ಕಡಲ ತೀರದಲ್ಲಿ ಮೇ 15- 31ರವರೆಗೆ ಭಜನಾ ಕಮ್ಮಟ, ಕೃಷಿಮೇಳ, ಮಾತೃ ವಂದನಾ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಮಲ್ಪೆ ಇದರ ವತಿಯಿಂದ ಉಡುಪಿಯ ಶ್ರೀಕೃಷ್ಣಾಪುರ ಮಠ, ಶ್ರೀಅದಮಾರು ಮಠ, ಶ್ರೀಪಲಿಮಾರು ಮಠ, ಶ್ರೀಪೇಜಾವರ ಮಠ ಹಾಗೂ ಶ್ರೀಸೋದೆ ವಾದಿರಾಜ ಮಠದ ಶ್ರೀಪಾದಂಗಳ ಅವರ ಸಂಕಲ್ಪದಂತೆ, ಶ್ರೀ ಈಶಪ್ರಿಯತೀರ್ಥರ ನೇತೃತ್ವದಲ್ಲಿ ಶ್ರೀಕೃಷ್ಣನು ಮಧ್ವರ ಭಕ್ತಿಗೆ ಒಲಿದು ಕಾಣಿಸಿಕೊಂಡು ಅವರ ಕೈ ಸೇರಿದ ಮಲ್ಪೆಯ ಕಡಲತೀರದ ‘ಶ್ರೀಆನಂದ ಶರಧಿ’ ಎಂಬ ಪ್ರತಿಷ್ಠಾನದ ನೂತನ ನಿವೇಶನದಲ್ಲಿ ಮೇ 15 ರಿಂದ ಮೇ 31 ರವರೆಗೆ “ಬೃಹತ್ ಕೃಷಿ ಮೇಳ, ಭಜನಾ ಕಮ್ಮಟ ಹಾಗೂ ಮಾತೃ ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು ತಿಳಿಸಿದ್ದಾರೆ.

ಉಡುಪಿ ಅದಮಾರು ಮಠದ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜ. 15ರಂದು ಸಂಜೆ 4 ಗಂಟೆಗೆ ಹಲಸು- ಮಾವು, ಕೃಷಿಮೇಳದ ಉದ್ಘಾಟನೆ ನಡೆಯಲಿದೆ. 15ರಿಂದ 31ರವರೆಗೆ ಗುಡಿ ಕೈಗಾರಿಕೆ- ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ಮೇ. 18ರಂದು ಮಧ್ಯಾಹ್ನ 3.30 ಕ್ಕೆ ಮಲ್ಪೆ ವಡಭಾಂಡೇಶ್ವರದ ಬಲರಾಮ ದೇವಸ್ಥಾನದಿಂದ ಶ್ರೀ ಆನಂದ ಶರಧಿ’ – ಮಲ್ಪೆಯ ಕಡಲತೀರದ ಪ್ರತಿಷ್ಠಾನದ ನೂತನ ನಿವೇಶನದವರೆ ಗಣ್ಯರೊಂದಿಗೆ ಭವ್ಯ ಶೋಭಾಯಾತ್ರೆ, ಬಳಿಕ ಭಜನಾ ಸ್ಪರ್ಧೆಯ ಉದ್ಘಾಟನೆಗೊಳ್ಳಲಿದೆ ಎಂದರು.

ಮೇ. 24 ರಂದು ಬೆಳಿಗ್ಗೆ 7 ಗಂಟೆಗೆ ಗ್ರಾಮೀಣ ಕ್ರೀಡಾ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮೇ.18ರಂದು ಭಜನಾ ಸ್ಪರ್ಧೆ ಉದ್ಘಾಟನೆಗೊಳ್ಳಲಿದ್ದು, ಅಂದು ಸುಮಾರು ಐದು ತಂಡಗಳಿಂದ ಭಜನೆ ನಡೆಯಲಿದೆ. ಮೇ.18ರಿಂದ ಮೇ. 31ರವರೆಗೆ ಪ್ರತೀ ದಿನ ಐದು ತಂಡಗಳಿಂದ ಭಜನೆ ನಡೆಯಲಿದೆ. ಕಿಶೋರ ತಂಡ, ಯುವಕರ ತಂಡ, ಪುರುಷರ ತಂಡ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.

ಮೇ. 31ರಂದು ನಡೆಯಲಿರುವ ಮಾತೃ ವಂದನಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಮಹಿಳಾ ಸಂಚಾಲಕಿ ತಾರಾ ಯು. ಆಚಾರ್ಯ, ಬೆಳಗ್ಗೆ 9 ರಿಂದ 10 ಗಂಟೆವರೆಗೆ ಸೌಭಾಗ್ಯ ಶರಧಿ ಕಾರ್ಯಕ್ರಮ ನಡೆಯಲಿದ್ದು, ಮುತೈದೆಯರಿಗೆ ಅರಿಶಿನ ಕುಂಕುಮ ವಿತರಣೆ, ಬಳೆಗಾರನನ್ನು ಕರೆಸಿ ಬಳೆ ಇಡುವ ಕಾರ್ಯಕ್ರಮ ನಡೆಯಲಿದೆ.

ಬಳಿಕ ಭಕ್ತಿ ಶರಧಿ ಕಾರ್ಯಕ್ರಮ ನಡೆಯಲಿದ್ದು, ಮಹಿಳೆಯರಿಂದ ವಿಷ್ಣು ಸಹಸ್ರ ನಾಮ ಪಠಣ ನಡೆಯಲಿದೆ. ಸಮೃದ್ಧಿ ಶರಧಿ ಕಾರ್ಯಕ್ರಮದಲ್ಲಿ ಗೋಪೂಜೆ ನಡೆಯಲಿದೆ. ಶುಭದೀಪ ಶರಧಿ, ಸಂದೇಶ ಶರಧಿ ನಡೆಯಲಿದೆ.

ಮಾತೃ ವಂಧ್ಯಾ ಶರಧಿ ಕಾರ್ಯಕ್ರಮದಲ್ಲಿ ಹಿರಿಯ ಮುತೈದೆಯರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಸಂಚಾಲಕರಾದ ದಿನೇಶ್ ಪುತ್ರನ್, ಗೋವಿಂದರಾಜ್, ಮಂಜು ಕೊಳ ಮಲ್ಪೆ, ಚಂದ್ರಕಾಂತ್, ರಾಧಾಕೃಷ್ಣ ಮೆಂಡನ್, ಸಂತೋಷ್ ಕುಮಾರ್, ಸುಮಿತ್ರಾ ಕೆರೆಮಠ ಮೊದಲಾದವು ಉಪಸ್ಥಿತರಿದ್ದರು.